ಹೊಸದಿಗಂತ ವರದಿ ಮೈಸೂರು:
ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಕೇಂದ್ರ ರಕ್ಷಣಾ ಇಲಾಖೆಯ ನಿವೃತ್ತ ಅಧಿಕಾರಿ ಎ.ಮಹದೇವಪ್ಪ ಅವರು ತಮ್ಮ 83 ವಯಸ್ಸಿನಲ್ಲಿ ಬುಧವಾರ ಸಂಜೆ ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ದಾಕ್ಷಾಯಿಣಿ, ಪುತ್ರಿ, ಅಳಿಯ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಮೂಲತಃ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಗ್ರಾಮದ ನಿವಾಸಿ ದಿ.ಅಂದಾನಶೆಟ್ಟರ ಪುತ್ರ.
ಮೃತರು ಮಹಾರಾಷ್ಟ್ರದ ಪಿಂಪ್ರಿಯ ಮದ್ದುಗುಂಡುಗಳ ತಯಾರಿಕೆ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು. ಆರೋಗ್ಯ ವಿಷಯ ಕುರಿತಂತೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದರು. ಲೇಖಕರು, ದಾನಿಗಳು, ಆಪ್ತ ಸಮಾಲೋಚಕರು, ಸಮಾಜ ಸೇವಕರು ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು.
ಹೀಗಾಗಿಯೇ ಇವರಿಗೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ, ಕರ್ನಾಟಕ ಜನತಾ ಸೇನಾದಳ ಟ್ರಸ್ಟ್ ಕೊಡ ಮಾಡುವ ಬುದ್ದ ಭಾರತ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದ್ದವು.
ಜೆಎಸ್ಸೆಸ್ ಆಸ್ಪತ್ರೆಗೆ ದೇಹದಾನ:
ಮಹದೇವಪ್ಪ ಅವರು ಬದುಕಿದ್ದಾಗ ಅವರು ಇಚ್ಚೆಪಟ್ಟಿದ್ದಂತೆ ಕುಟುಂಬದವರು ಅವರ ದೇಹವನ್ನು ಗುರುವಾರ ಮೈಸೂರಿನ ಜೆಎಸ್ಸೆಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಿದರು. ಅತ್ಯಂತ ದುಃಖದಲ್ಲಿಯೂ ದೇಹದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.