ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಜಾಹಿದ್ದೀನ್ ಉಗ್ರ ಸಂಘಟನೆ, ಭಾರತವನ್ನು ಲೂಟಿ ಹೊಡೆದ ಈಸ್ಟ್ ಇಂಡಿಯಾ ಕಂಪನಿ ಕೂಡ ಇಂಡಿಯಾ ಹೆಸರನ್ನೇ ಇಟ್ಟುಕೊಂಡಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷಗಳು INDIA ಹೆಸರಿಟ್ಟ ಮಾತ್ರಕ್ಕೆ ಅದು ಭಾರತವಾಗುವುದಿಲ್ಲ . ಇದು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ವಿಪಕ್ಷಗಳ ಒಕ್ಕೂಟ ಯಾವುದೇ ನಿರ್ದೇಶನವಿಲ್ಲದೆ ಸಾಗುತ್ತಿದೆ. ಇಂಡಿಯಾ ಹೆಸರಿಟ್ಟುಕೊಂಡು ಜನರ ಮನಸ್ಸಿನಲ್ಲಿ ಹತ್ತಿರವಾಗುವ ಕೆಲಸಕ್ಕೆ ಮುಂದಾಗಿದೆ.ಈ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ಪ್ರತಿಪಕ್ಷಗಳು ಸೋಲು, ದಣಿವು, ಹತಾಶರಾಗಿ ಮೋದಿಯನ್ನು ವಿರೋಧಿಸಬೇಕು ಎಂಬ ಒಂದೇ ಒಂದು ಅಜೆಂಡಾ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅವರು ವಿರೋಧಪಕ್ಷಗಳಾಗಿಯೇ ಉಳಿಯಲು ನಿರ್ಧರಿಸಿದಂತಿದೆ.2024ರ ಚುನಾವಣೆಯಲ್ಲಿ ಜನಬೆಂಬಲದಿಂದ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದರು.
ಜುಲೈ 18 ರಂದು ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಒಕ್ಕೂಟ ಸಭಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್ಜೆಡಿ ಸೇರಿದಂತೆ 26 ಪಕ್ಷಗಳು ಪಾಲ್ಗೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ವಿಪಕ್ಷಗಳು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಎರಡನೇ ಸಭೆಯಲ್ಲಿ ಒಕ್ಕೂಟಕ್ಕೆ ಇಂಡಿಯಾ ಹೆಸರಿಡಲಾಗಿದೆ.