ಹೊಸದಿಗಂತ ವರದಿ, ಹುಬ್ಬಳ್ಳಿ:
ಕಳೆದು ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ನಗರದ ಪ್ರಸಿದ್ಧ ಕೆರೆಯಾದ ಚನ್ನಬಸವಸಾಗರ ಉಣಕಲ್ ಕೆರೆ ಕೋಡಿ ಹರಿದಿದ್ದು, ಮಂಗಳವಾರ ಉಣಕಲ್ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅವರ ನೇತೃತ್ವದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಬಾಗಿನ ಅರ್ಪಿಸಿದರು.
ಗ್ರಾಮದ ಮಹಿಳೆಯರು ಕಾಯಿ, ಅಕ್ಕಿ, ಬಳೆ, ಅರಿಸಿನ, ಕುಂಕುಮ ಹಾಗೂ ಹಸಿರು ಬಟ್ಟೆಯನ್ನು ಮೊರದಲ್ಲಿ ಇಟ್ಟುಕೊಂಡು ಕೋಡಿ ಹರಿಯುವ ಜಾಗಕ್ಕೆ ಸಂಭ್ರಮದಿಂದ ಬಂದರು. ಪುರೋಹಿತರು ಕೆರೆಗೆ ಪೂಜೆ ನೆರವೇರಿಸಿದರು.
ಉಣಕಲ್ ಗ್ರಾಮ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಸಾಯಿ ನಗರ, ಭೈರಿದೇವರ ಕೊಪ್ಪ, ತಾಜನಗರದ ಸಿವಾಸಿಗಳು ಈ ಶುಭಾಕಾರ್ಯದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಉಮೇಶ ಕೌಜಗೇರಿ ಸೇರಿದಂತೆ ಗ್ರಾಮಸ್ಥರಿದ್ದರು.