ಎಷ್ಟು ದಿನ ಬೇಕಾದರೂ ಮಣಿಪುರದ ಬಗ್ಗೆ ಚರ್ಚೆಗೆ ನಾವು ಸಿದ್ಧ: ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಣಿಪುರ ಹಿಂಸಾಚಾರ ಕುರಿತು ಎಷ್ಟು ದಿನ ಬೇಕಾದರೂ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ಮಂಗಳವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಮುಂಗಾರು ಅಧಿವೇಶನದ ಮೊದಲ ದಿನದಿಂದ ಉಭಯ ಸದನಗಳಲ್ಲಿ ಕಲಾಪಕ್ಕೆ ಅಡ್ಡಿಯುಂಟಾಗಿದೆ.

ಇಂದು ಮತ್ತೆ ಲೋಕಸಭೆಯಲ್ಲಿ ಬಹು-ರಾಜ್ಯ ಸಹಕಾರ ಸಂಘಗಳ(ತಿದ್ದುಪಡಿ) ಮಸೂದೆ ಮೇಲಿನ ಕಿರು ಚರ್ಚೆ ವೇಳೆ ಉತ್ತರಿಸಿದ ಅಮಿತ್ ಶಾ, ಸರ್ಕಾರ ಮುಚ್ಚಿಡುವಂತಹದ್ದು ಏನೂ ಇಲ್ಲ ಮತ್ತು ಮಣಿಪುರ ಸಮಸ್ಯೆಯ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಈ ಸಂಬಂಧ ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿಪಕ್ಷಗಳ ನಾಯಕರಿಗೆ ತಾವು ಪತ್ರ ಬರೆದಿರುವುದಾಗಿ ತಿಳಿಸಿದರು.

ಇದೇ ವೇಳೆ ಘೋಷಣೆ ಕೂಗುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ ಶಾ , ಘೋಷಣೆಗಳನ್ನು ಕೂಗುವ ಜನ ಸಹಕಾರ ನೀಡುವುದರಲ್ಲಿ ಅಥವಾ ಸಹಕಾರಿಗಳಲ್ಲಿ ಆಸಕ್ತಿ ಹೊಂದಿಲ್ಲ.ದಲಿತರು ಅಥವಾ ಮಹಿಳಾ ಕಲ್ಯಾಣದಲ್ಲಿ ಆಸಕ್ತಿ ಹೊಂದಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ಚಾಟಿ ಬೀಸಿದರು .

ಮಣಿಪುರದ ಬಗ್ಗೆ ಎಷ್ಟು ಸಮಯವರೆಗೆ ಬೇಕಾದರೂ ಚರ್ಚೆಗೆ ನಾವು(ಸರ್ಕಾರ) ಸಿದ್ಧರಿದ್ದೇವೆ ಎಂದು ನಾನು ಉಭಯ ಸದನಗಳ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿದ್ದೇನೆ ಮತ್ತು ಇದನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ. ಸರ್ಕಾರ ಯಾವುದಕ್ಕೂ ಹೆದರುವುದಿಲ್ಲ. ಮಣಿಪುರ ವಿಷಯದ ಬಗ್ಗೆ ಚರ್ಚೆ ಮಾಡಲು ಬಯಸುವವರು ಚರ್ಚೆ ಮಾಡಬಹುದು. ನಾವು ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!