ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವೇ ಹೆಮ್ಮೆಪಡುವಂತಹ 24ನೇ ಕಾರ್ಗಿಲ್ ವಿಜಯೋತ್ಸವವು ನಾಳೆ (ಬುಧವಾರ ಜುಲೈ 26ರಂದು) ಲಡಾಖ್ನ ದ್ರಾಸ್ ನಲ್ಲಿ ಜರುಗಲಿದೆ.
ಈಗಾಗಲೇ ಬರದ ಸಿದ್ಧತೆಗಳು ನಡೆದಿದ್ದು, ಈ ವಿಜಯೋತ್ಸವವನ್ನು ಪ್ರತಿ ವರ್ಷಕ್ಕಿಂತಲೂ ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿ ವಿಭಿನ್ನವಾಗಿ ಆಚರಣೆಗೆ ರಕ್ಷಣಾ ಇಲಾಖೆ ಸಜ್ಜಾಗಿದೆ.
ಕಾರ್ಯಕ್ರಮಕ್ಕೆ ಬುಧವಾರ ಬೆಳಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಯೋಧರ ತ್ಯಾಗ, ಬಲಿದಾನ ಕುರಿತು ಸ್ಮರಿಸಲಿದ್ದಾರೆ.
ಈ ಬಾರಿ ಜುಲೈ 26 ಮತ್ತು ಜುಲೈ 27ರಂದು ಎರಡು ದಿನ ಈ ವಿಜಯೋತ್ಸವ ಆಚರಣೆ ಮಾಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ.
ಸಮಾರಂಭದಲ್ಲಿ ಸೇನೆಯ ಬ್ಯಾಂಡ್ ತಂಡ ಸಹ ದೇಶಭಕ್ತಿ ಗೀತೆಗಳನ್ನು ಪ್ರದರ್ಶಿಸಲಿದೆ. ಇದರೊಂದಿಗೆ ಸ್ಥಳೀಯ ಸಾಂಸ್ಕೃತಿಕ ಕಲಾವಿದರು ತಮ್ಮ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ.
ಪಾಕ್ ವಿರುದ್ಧದ ಭಾರತದ ವಿಜಯೋತ್ಸವ ಆಚರಣೆ ವೇಳೆ ನಮ್ಮ ಯೋಧರ ಧೈರ್ಯ, ಕೊಡುಗೆಗಳನ್ನು ಗಣ್ಯರು ಸ್ಮರಿಸುತ್ತಾರೆ.
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ಧೈರ್ಯ ಹಾಗೂ ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ಯುದ್ಧದಲ್ಲಿ ತಾಯ್ನಾಡಿಗಾಗಿ ಧೈರ್ಯ, ಸಾಹಸ ಪ್ರದರ್ಶಿಸಿ ಹುತಾತ್ಮರಾದ ಭಾರತೀಯ ವೀರ ಸೈನಿಕರನ್ನು ಹೆಮ್ಮೆಯಿಂದ ಸ್ಮರಿಸುವ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ.