ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಲಕ್ಷ್ಮಿಗೆ ಯೋಜನೆಗೆ ಈವರೆಗೆ ಒಂದು ಕೋಟಿ ಕುಟುಂಬಗಳು ನೋಂದಣಿಯಾಗಿದೆ. 1.28 ಕೋಟಿ ಕುಟುಂಬಗಳು ನೋಂದಣಿಯಾಗಬೇಕಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಶನಿವಾರ ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಆ. 18 ಅಥವಾ 20ನೇ ತಾರೀಕು ಸೋನಿಯಾ ಗಾಂಧಿ ಮತ್ತು ಖರ್ಗೆ ಅವರ ದಿನಾಂಕ ಕೇಳಿದ್ದು, ಆ ದಿನ ಡಿ.ಬಿ.ಟಿ ಮುಖಾಂತರ ಮನೆಯ ಯಜಮಾನಿಗೆ ಹಣ ಹಾಕುತ್ತೇವೆ ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ 1.41 ಕೋಟಿ ಕುಟುಂಬಗಳಿಗೆ ಗೃಹ ಜ್ಯೋತಿಯ ಅನ್ವಯ ಆಗಲಿದೆ. ಈಗಾಗಲೇ 1 ಕೋಟಿ 41 ಲಕ್ಷ ಕುಟುಂಬಗಳ ನೋಂದಣಿ ಆಗಿದೆ. ಕುಟುಂಬಗಳಿಗೆ ಜೀರೋ ಪರ್ಸೆಂಟ್ ಬಿಲ್ ನ ಪ್ರಯೋಜನ ಸಿಗಲಿದೆ. ಮುಖ್ಯಮಂತ್ರಿಗಳು ಕಲ್ಬುರ್ಗಿಯಲ್ಲಿ ಚಾಲನೆ ನೀಡಿದ್ದಾರೆ. ಜಿಲ್ಲಾಮಟ್ಟದಲ್ಲಿ ನಾವು ಚಾಲನೆ ನೀಡುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಬಹಳಷ್ಟು ಅನುಭವಸ್ಥರು. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ನುಡಿದಂತೆ ನಡೆಯುತ್ತಿಲ್ಲ ಎಂದು ಹೇಳುತ್ತಾರೆ. ಧೈರ್ಯವಿದ್ದರೆ ಮುಂದೆ ಬಂದು ಹೇಳಲಿ, ನಾವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ, ಕುಮಾರಸ್ವಾಮಿಯವರು ಜನರಿಗೆ ಈ ಯೋಜನೆಗಳಿಂದ ಲಾಭ ಇಲ್ಲ.ಅದನ್ನು ಮುಚ್ಚಿ ಬಿಡಿ ಎಂದು ಹೇಳಲಿ ಸಾಕು ಎಂದವರು ಹೇಳಿದರು.
ಕುಮಾರಸ್ವಾಮಿ ಅವರ ಬಗ್ಗೆ ಬಹಳ ಗೌರವವಿದೆ. ಮುಖ್ಯಮಂತ್ರಿ ಆಗಿದ್ದಾಗ ನಾನು ಶಾಸಕಿಯಾಗಿ ಕೆಲಸ ಕೂಡ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಹಿಟ್ ಆಂಡ್ ರನ್ ಕೇಸು ಮಾಡಲು ಹೋಗಬಾರದು, ಎಲ್ಲಾ ಕಾಂಗ್ರೆಸ್ ನವರು ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಎಂದರು.