ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಬಲ್ ಬ್ಯಾರಲ್ ಗನ್ ಸ್ವಚ್ಛಗೊಳಿಸುವ ವೇಳೆ ಗುಂಡು ತಗುಲಿ ಕಾನ್ಸ್ಟೇಬಲ್ ಸಾವನ್ನಪ್ಪಿರುವ ದುರಂತ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.
ಅಯೋಧ್ಯೆ ರಾಮಜನ್ಮಭೂಮಿ ಸಂಕಿರ್ಣದ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಪಿಎಸಿ ಕಾನ್ಸ್ ಟೇಬಲ್ ಕುಲದೀಪ್ ಕುಮಾರ್ ತ್ರಿಪಾಠಿ (30) ಇಂದು ಬೆಳಗ್ಗೆ ಗುಂಡೇಟಿಗೆ ಮೃತಪಟ್ಟಿದ್ದಾರೆ.
ರಾಮಜನ್ಮಭೂಮಿ ಕಾಂಪ್ಲೆಕ್ಸ್ ಗೆ ಹೊಂದಿಕೊಂಡಿರುವ ವೇದಮಂದಿರದ ಬಳಿಯ ಕ್ರಾಸಿಂಗ್ ಅರಣ್ಯದ ಬಳಿ ಪಿಎಸಿ ಕಾನ್ಸ್ ಟೇಬಲ್ ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆಯಿಂದಾಗಿ ಅವರ ಡಬಲ್ ಬ್ಯಾರಲ್ ಗನ್ ನಲ್ಲಿ ನೀರು ಸೇರಿಕೊಂಡಿತ್ತು. ಗನ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ಅವರ ಕುತ್ತಿಗೆಗೆ ತಗುಲಿದೆ. ಇತರ ಸಿಬ್ಬಂದಿಗಳು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾನ್ಸ್ ಟೇಬಲ್ ಮೃತಪಟ್ಟಿದ್ದಾರೆ ಎಂದು ಭದ್ರತಾ ವಿಭಾಗದ ಎಸ್ ಪಿ ಪಂಕಜ್ ಪಾಂಡೆ ಮಾಹಿತಿ ನೀಡಿದ್ದಾರೆ.