ಗುರುಗಳು ಬದುಕಿನ ಅಂಧಕಾರ ತೊಲಗಿಸಿ ಜ್ಞಾನ ಪ್ರಕಾಶ ನೀಡುವ ಬೆಳಕು: ಸೋಮಶೇಖರ ನಾಯಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗುರುವಿಲ್ಲದ ಗುರಿಯನ್ನು ಊಹಿಸುವುದು ಕಷ್ಟ ಸಾಧ್ಯ. ದುರಭ್ಯಾಸ ಕೆಟ್ಟ ಯೋಚನೆಯಂತಹ ಅಂಧಕಾರವನ್ನು ದೂರಗೊಳಿಸಿ ಜ್ಞಾನ ಸದ್ಭುದ್ದಿಗಳಂತಹ ಪ್ರಕಾಶವನ್ನು ನೀಡುವಂತಹ ಸಾಮರ್ಥ್ಯ ಉಳ್ಳವನು ಗುರು. ಶಿಕ್ಷಕನಾದವನು ವಿದ್ಯಾರ್ಥಿಯ ಸಾಮರ್ಥ್ಯವನ್ನರಿತು ಬೋಧಿಸಬೇಕು. ಹಿರಿಯರ ಹಾಗೂ ಭಗವಂತನ ಅನುಗ್ರಹವಿಲ್ಲದಿದ್ದವರ ಬಾಳು ವ್ಯರ್ಥ.ಸುಖಮಯ ಬದುಕಿಗೆ ಗುರುಹಿರಿಯರ ಅನುಗ್ರಹ ಮುಖ್ಯ. ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ ಸರ್ವಪಳ್ಳಿ ರಾಧಾಕೃಷ್ಣನ್‌ ಅವರೇ ಇದಕ್ಕೆ ಸಾಕ್ಷಿ ಎಂದು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು.

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕ ಮತ್ತು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಕರು ಮಕ್ಕಳ ಜ್ಞಾನ ವೃದ್ಧಿಗೆ ಬೇಕಾದ ಬೋಧನೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಇದರಿಂದ ಮಕ್ಕಳು ಶ್ರೇಷ್ಠರಾಗಲು ಪೂರಕ ವಾತಾವರಣ ಸೃಷ್ಠಿಯಾಗುತ್ತದೆ. ಮಾನವೀಯತೆ ಮತ್ತು ಸ್ನೇಹಪರವಾದ ಗುರುವಿನ ಮಾರ್ಗದರ್ಶನ ಮಕ್ಕಳಿಗೆ ಭವಿಷ್ಯದ ಬದುಕಿಗೆ ಆದರ್ಶವಾಗುತ್ತದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಯನ್ನು ಹೆಚ್ಚು ಅಂಕ ಪಡೆಯುತ್ತಾ ಹುರಿದುಂಬಿಸುವುದು ಗುರುವಿನ ಆದ್ಯ ಕರ್ತವ್ಯವಾಗಬೇಕು ಎಂದರು.

ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸರ್ವರೂ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಎಲ್ಲಾ ಉಪನ್ಯಾಸಕರಿಗೆ ಅವರವರ ಭಾವಚಿತ್ರವಿರುವ ಸ್ಮರಣಿಕೆ ಮೇಲೆ ಗುರುಗಳ ಶ್ರೇಷ್ಠತೆಯನ್ನು ಅಕ್ಷರ ರೂಪದಲ್ಲಿ ಬರೆದು ನೀಡುವ ಮೂಲಕ ಗೌರವಿಸಿದರು. ವಿದ್ಯಾರ್ಥಿಗಳು ಎಲ್ಲಾ ಉಪನ್ಯಾಸಕರ ಆಶೀರ್ವಾದ ಪಡೆದರು.

ರೋವರ್ಸ್ ರೇಂಜರ್ಸ್ ನಾಯಕಿ ಸವಿತಾ ಕೈಲಾಸ್, ನಾಯಕ ಪ್ರವೀಣ್ ಎರ್ಮಾಯಿಲ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್., ಉಪನ್ಯಾಸಕರಾದ ಜಯಶ್ರೀ ವಿ. ದಂಬೆಕೋಡಿ, ಗಿರೀಶ್, ಜಯಪ್ರಕಾಶ್ ಆರ್., ಶ್ರೀಧರ್ ಪುತ್ರನ್, ಯೋಗಣ್ಣ ಎಂ.ಎಸ್., ಮನೋಜ್ ಕುಮಾರ್ ಬಿ.ಎಸ್., ರತ್ನಾಕರ.ಎಸ್, ಪ್ರಜ್ವಲ್ ಜೆ., ಜ್ಯೋತಿ ಪಿ. ರೈ, ಪೂರ್ಣಿಮಾ, ಸುಧಾ, ಭವ್ಯಶ್ರೀ ಕುಲ್ಕುಂದ, ಶ್ರುತಿ ಯಾಲದಾಳು, ಸೌಮ್ಯಾ, ಶ್ಯಾಮಿಲಿ, ವಿದ್ಯಾರ್ಥಿ ನಾಯಕ ಚೇತನ್, ಕಾರ್ಯದರ್ಶಿ ಅಕ್ಷಯ್ ಕಂದಡ್ಕ, ಉಪಾಧ್ಯಕ್ಷೆ ಪ್ರೀಕ್ಷಾ, ಸಾಂಸ್ಕೃತಿಕ ಕಾರ್ಯದರ್ಶಿ ವಿದ್ಯಾಲಕ್ಷ್ಮಿ, ಕ್ರೀಡಾ ಕಾರ್ಯದರ್ಶಿ ಅಜಿತ್ ಜೋಗಿ ವೇದಿಕೆಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!