ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಭೂ ಕಬಳಿಕೆ ಮಾಡಿಲ್ಲ, ಕಾನೂನಾತ್ಮಕವಾಗಿಯೇ ಜಮೀನು ಖರೀದಿ ಮಾಡಿದ್ದೇವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ (D.Sudhakar) ಸ್ಪಷ್ಟನೆ ನೀಡಿದರು.
ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, ಜಮೀನು ವ್ಯವಹಾರ ಪ್ರಕರಣದಲ್ಲಿ ಕಾನೂನಾತ್ಮಕವಾದ ತೊಡಕು ಯಾವುದೂ ಇಲ್ಲ. ಇದು ಬಹಳ ಹಳೇ ಕೇಸ್, ಕಾನೂನು ಪ್ರಕಾರ ವ್ಯವಹಾರ ನಡೆದಿದೆ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಕೇಳಿಬಂದ ಸ್ಪಷ್ಟನೆ ನೀಡಿದರು.
ಅವರು ನನ್ನನ್ನು ಭೇಟಿ ಮಾಡುವುದು, ದೌರ್ಜನ್ಯದ ಕೇಸ್ ಹಾಕುವುದು, ವಿಡಿಯೋ ತುಣುಕುಗಳನ್ನು ಬಿಡುವುದು ಇದೆಲ್ಲವೂ ಶುದ್ಧ ಸುಳ್ಳು. ಸಚಿವನಾಗಿದ್ದೇನೆ ಅನ್ನೋ ಕಾರಣಕ್ಕೆ ತೇಜೋವಧೆ ಮಾಡಲು ಪಿತೂರಿ ನಡೆಸಲಾಗುತ್ತಿದೆ. ಆದರೆ ಇದರಲ್ಲಿ ಅವರಿಗೆ ಜಯ ಸಿಗುವುದಿಲ್ಲ ಎಂದು ಹೇಳಿದರು.
ನಾನು ತಪ್ಪು ಮಾಡಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಕೊಡುತ್ತಿದ್ದೆ. ತಪ್ಪು ಮಾಡದಿದ್ದಾಗ ರಾಜೀನಾಮೆ ಏಕೆ ಕೊಡಬೇಕು , 60 ವರ್ಷದಲ್ಲಿ ಎಲ್ಲಿಯೂ ಕೂಡ ನನ್ನ ಮೇಲೆ ಆಪಾದನೆಗಳು ಇಲ್ಲ. ನಾನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ಅವರಿಗೆ ಏನು ದಾಖಲೆ ಕೊಡಬೇಕೋ ಕೊಟ್ಟಿದ್ದೇನೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸಿ ಎಂದು ಕೇಳಿದ್ದೇನೆ ಎಂದರು.
ಬ್ರಾಹ್ಮಣರ ಬಗ್ಗೆ ಸಚಿವಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಧಾಕರ್, ನನಗೆ ಎಲ್ಲಾ ಜಾತಿಗಳ ಬಗ್ಗೆ ಅಪಾರ ಗೌರವವಿದೆ. ಬ್ರಾಹ್ಮಣ ಸಂಸ್ಕೃತಿ, ಜೈನ ಸಂಸ್ಕೃತಿ ಎರಡು ಒಂದೇ. ಬ್ರಾಹ್ಮಣರು ಜನಿವಾರ ಹಾಕುತ್ತಾರೆ, ಜೈನರೂ ಜನಿವಾರ ಹಾಕುತ್ತಾರೆ. ಬ್ರಾಹ್ಮಣರ ಆಚಾರ ವಿಚಾರಗಳಂತೆಯೇ ನಮ್ಮ ವಿಚಾರಗಳು ಇವೆ ಎಂದರು.
ನಾನು ಯಾವುದೇ ಜಾತಿಯನ್ನು ನಿಂದನೆ ಮಾಡುವಂಥ ಪ್ರಶ್ನೆ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಎಲ್ಲೂ ಜಾತಿ ನಿಂದನೆ ಮಾಡಿಲ್ಲ. ಸಣ್ಣಪುಟ್ಟ ಸಮುದಾಯವನ್ನೂ ಕೂಡ ಪ್ರೀತಿಯಿಂದ ಕಂಡಿದ್ದೇನೆ ಎಂದು ಸುಧಾಕರ್ ಹೇಳಿದ್ದಾರೆ.