ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಚಿರತೆ ಭೀತಿ ದಿನೇದಿನೇ ಹೆಚ್ಚುತ್ತಿರುವ ನಡುವೆ, ಕುತೂಹಲದಿಂದ ತೆಗೆದುಕೊಂಡ ಒಂದು ನಿರ್ಧಾರ ರೈತನಿಗೆ ಭಾರೀ ಸಂಕಷ್ಟ ತಂದೊಡ್ಡಿದ ಘಟನೆ ಚಾಮರಾಜನಗರ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗೆ ಗ್ರಾಮದಲ್ಲಿ ಮೂರು ಹಸುಗಳನ್ನು ಚಿರತೆ ಕೊಂದು ಹಾಕಿದ ಹಿನ್ನೆಲೆಯಲ್ಲಿ, ರುದ್ರ ಎಂಬವರ ಜಮೀನಿನಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಅಳವಡಿಸಿತ್ತು. ಯಾರೂ ಇಲ್ಲದ ಸಮಯದಲ್ಲಿ ಕಿಟ್ಟಿ ಎಂಬ ರೈತ ಕುತೂಹಲದಿಂದ ಬೋನಿನೊಳಗೆ ಹೋಗಿದ್ದಾಗಿ ತಿಳಿದುಬಂದಿದೆ. ಅವರು ಒಳಗೆ ಪ್ರವೇಶಿಸಿದ ತಕ್ಷಣವೇ ಬೋನಿನ ಬಾಗಿಲು ಸ್ವಯಂಚಾಲಿತವಾಗಿ ಮುಚ್ಚಿಕೊಂಡು ಲಾಕ್ ಆಗಿದೆ.
ಬೋನಿನಿಂದ ಹೊರಬರಲು ಹಲವು ಬಾರಿ ಯತ್ನಿಸಿದರೂ ಪ್ರಯೋಜನವಾಗದೆ, ಕಿಟ್ಟಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಸ್ಥಳೀಯ ರೈತರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೋನಿನ ಬಾಗಿಲು ತೆರದು ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಕಿಟ್ಟಿ ಪಾರಾಗಿದ್ದು, ಗ್ರಾಮದಲ್ಲಿ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

