ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ.ವಿ.ದೀಪಾವಳಿ
ರಾಣೇಬೆನ್ನೂರು: ನೋಡಲು ಸುಂದರ ದೇವಾಲಯ, ಅದರ ಸುತ್ತಲೂ ಶ್ರೀರಾಮ, ಲಕ್ಷ್ಮಣ ಸೀತಾದೇವಿ ಹನುಮಂತ ಸೇರಿದಂತೆ ಹಲವಾರು ಸಾಧು ಸಂತರ ಸಂಪೂರ್ಣ ಮಾಹಿತಿ. ದೇವಸ್ಥಾನದ ಒಳ ಹೋಗುತ್ತಿದ್ದಂತೆ ಕಣ್ಮನ ಸೆಳೆಯುವ ಲಲಿತ ಕಂಬಗಳು. ಒಳ ಭಾಗದಲ್ಲಿ ರಾಮ, ಲಕ್ಷ್ಮಣ, ಸೀತಾದೇವಿ ಹಾಗೂ ಹನುಮಂತನ ಮೂರ್ತಿ ಪ್ರತಿಷ್ಠಾಪನೆ. ಇದನ್ನೆಲ್ಲ ನೋಡುತ್ತಿದ್ದಂತೆಯೇ ಇದೇನಪ್ಪಾ ನಾವು ಅಯೋಧ್ಯೆ ರಾಮಮಂದಿರದಲ್ಲಿ ಇದ್ದೇವೆ ಎಂಬ ಭಾವನೆ ಬರುವುದಂತೂ ಖಂಡಿತ.
ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಸಂಘಟಕರು ಇಲ್ಲಿನ ನಗರ ಸಭೆಯ ಕ್ರೀಡಾಂಗಣದಲ್ಲಿ ರಾಣೇಬೆನ್ನೂರ ಕಾ ರಾಜಾ ಗಣೇಶ ಪ್ರತಿಷ್ಠಾಪನೆಯ ಮಹಾಮಂಟಪದಲ್ಲಿ ಮರ್ಯಾದಾ ಪುರುಷೋತ್ತಮ ಅಯೋಧ್ಯಾಪತಿ ಶ್ರೀರಾಮಮಂದಿರ ನಿರ್ಮಾಣ ಮತ್ತು ಮಂದಿರ ನಿರ್ಮಾಣದ ಹಿಂದಿರುವ ಸಮಗ್ರ ಇತಿಹಾಸ ಬಿಂಬಿಸುವ ಸ್ತಬ್ದ ಚಿತ್ರಗಳ ಕಲ್ಪನೆಯ ಜೊತೆಗೆ ಸಂಪೂರ್ಣ ರಾಮಾಯಣದ ಕಲಾಕೃತಿಗಳ ರಚನೆ ಹೀಗೆ ಹಲವು ವಿಶೇಷತೆಗಳಿಂದ ಅಂದಾಜು 1.50 ಕೋಟಿಗೂ ಅಧಿಕ ರೂ.ಗಳ ವೆಚ್ಚದಲ್ಲಿ ಅಯೋಧ್ಯೆ ರಾಮಮಂದಿರ ರೀತಿ ನಿರ್ಮಾಣ ಮಾಡಿರುವುದು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಮಮಂದಿರ ನೋಡಲು ಜನತೆ ಮುಗಿಬೀಳುತ್ತಿರುವುದು ವಿಶೇಷವಾಗಿದೆ.
ದೇಶಭಕ್ತಿ, ರಾಷ್ಟ್ರಪ್ರೇಮ, ಸನಾತನ ಹಿಂದು ಸಂಸ್ಕೃತಿ, ಧಾರ್ಮಿಕತೆ, ರಾಮಾಯಣ ಹೀಗೆ ನಮ್ಮ ದೇಶದ ಸಂಸ್ಕೃತಿ ಎತ್ತಿ ಹಿಡಿಯುವ ಹಲವು ವೈಶಿಷ್ಟ್ಯತೆಗಳ ವಿಚಾರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ ಇಲ್ಲಿ ಕಾಣಬಹುದು. 2 ಸಾವಿರ ವರ್ಷಗಳ ಭಾರತದ ಇತಿಹಾಸ ಇಲ್ಲಿದೆ. ಅ. 13ರ ವರೆಗೆ ಪ್ರತಿನಿತ್ಯ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ವೀಕ್ಷಿಸಲು ಅವಕಾಶವಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ಅ. 14ರಂದು ಬೃಹತ್ ಶೋಭಾಯಾತ್ರೆಯ ಮೂಲಕ ಗಣೇಶ ವಿಸರ್ಜನೆ ಮಾಡಲಾಗುತ್ತದೆ.