ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊರೊಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ 20 ವರ್ಷದ ಡಾಕ್ಟರೇಟ್ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಎಂಬುವವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಆರೋಪಿಯನ್ನು ಪೊಲೀಸರು ತಕ್ಷಣವೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷ ಟೊರೊಂಟೊದಲ್ಲಿ ನಡೆದ 41ನೇ ಕೊಲೆ ಪ್ರಕರಣ ಇದಾಗಿದ್ದು, ಶಿವಾಂಕ್ ಸಾವು ಭಾರತೀಯ ಸಮುದಾಯಕ್ಕೆ ದೊಡ್ಡ ಆಘಾತ ನೀಡಿದೆ.
ಕಳೆದ ವಾರವಷ್ಟೇ 30 ವರ್ಷದ ಭಾರತೀಯ ಮಹಿಳೆ ಹಿಮಾಂಶಿ ಖುರಾನಾ ಅವರ ಶವ ನಿವಾಸವೊಂದರಲ್ಲಿ ಪತ್ತೆಯಾಗಿತ್ತು. ನಾಪತ್ತೆಯಾದ ಕೇವಲ ಒಂದು ದಿನದ ನಂತರ ಅವರ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ 32 ವರ್ಷದ ಅಬ್ದುಲ್ ಗಫೂರಿ ಎಂಬಾತನ ವಿರುದ್ಧ ಪೊಲೀಸರು ಪ್ರಥಮ ದರ್ಜೆ ಕೊಲೆ ಆರೋಪದ ಮೇಲೆ ವಾರಂಟ್ ಹೊರಡಿಸಿದ್ದಾರೆ.
ಈ ಸರಣಿ ಹತ್ಯೆಗಳ ಬಗ್ಗೆ ಭಾರತ ಸರ್ಕಾರ ತೀವ್ರ ದುಃಖ ವ್ಯಕ್ತಪಡಿಸಿದೆ. ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅಧಿಕಾರಿಗಳು ಮೃತ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ಸ್ವದೇಶಕ್ಕೆ ತರಲು ಮತ್ತು ಕಾನೂನು ಹೋರಾಟಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

