ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಐದನೇ ಪಟ್ಟಿಯಲ್ಲಿ 14 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ನವೆಂಬರ್ 7 ರಂದು ಬಿಡುಗಡೆ ಮಾಡಿತ್ತು, ಅದರಲ್ಲಿ 12 ಹೆಸರುಗಳಿತ್ತು.
ಬಿಜೆಪಿಯ ಐದನೇ ಪಟ್ಟಿಯ ಪ್ರಕಾರ, ಬೆಳ್ಳಂಪಲ್ಲಿ (ಎಸ್ಸಿ) ಕ್ಷೇತ್ರದಿಂದ ಕೊಯ್ಲಾ ಇಮಾಜಿ, ಪೆದ್ದಪಲ್ಲಿಯಿಂದ ದುಗ್ಯಾಲ ಪ್ರದೀಪ್, ಸಂಗಾರೆಡ್ಡಿ ಕ್ಷೇತ್ರದಿಂದ ದೇಶಪಾಂಡೆ ರಾಜೇಶ್ವರ್ ರಾವ್, ಮೇಡ್ಚಲ್ ಕ್ಷೇತ್ರದಿಂದ ಯೆನುಗು ಸುದರ್ಶನ್ ರೆಡ್ಡಿ, ಎನ್. ರಾಮಚಂದ್ರರಾವ್, ಸೆರಿಲಿಂಗಂಪಲ್ಲಿ ಕ್ಷೇತ್ರದಿಂದ ರವಿಕುಮಾರ್ ಯಾದವ್, ನಾಂಪಲ್ಲಿ ಕ್ಷೇತ್ರದಿಂದ ರಾಹುಲ್ ಚಂದ್ರ, ಚಂದ್ರಾಯನಗುಟ್ಟದಿಂದ ಕೆ. ಮಹೇಂದ್ರ, ಸಿಕಂದರಾಬಾದ್ ಕಂಟೋನ್ಮೆಂಟ್ (ಎಸ್ಸಿ) ಸ್ಥಾನದಿಂದ ಗಣೇಶ್ ನಾರಾಯಣ್, ದೇವರಕಾಡದಿಂದ ಕೊಂಡ ಪ್ರಶಾಂತ್ ರೆಡ್ಡಿ, ವನಪರ್ತಿಯಿಂದ ಅನುಗ್ನಾ ರೆಡ್ಡಿ, ಆಲಂಪುರ (ಎಸ್ಸಿ) ಕ್ಷೇತ್ರದಿಂದ ಮಾರಮ್ಮ, ಕೆ. ಪುಲ್ಲಾರಾವ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಮಧಿರಾ (ಎಸ್ಸಿ) ಕ್ಷೇತ್ರದಿಂದ ಪೆರುಮಾರಪಳ್ಳಿ ವಿಜಯರಾಜು ಅವರಿಗೆ ಟಿಕೆಟ್ ನೀಡಲಾಗಿದೆ.
ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ನವೆಂಬರ್ 30 ರಂದು ಮತದಾನ ನಡೆಯಲಿದೆ. ಈ ಹಿಂದೆ ಮತದಾನಕ್ಕೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಇಂದು (ನ.10) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇನ್ನೂ ನಾಮಪತ್ರ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳು ಇಂದು ಸಂಜೆಯೊಳಗೆ ಸಂಬಂಧಪಟ್ಟ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಬಹುದು. ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈಗ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆಯು ನವೆಂಬರ್ 13 ರವರೆಗೆ ನಡೆಯಲಿದೆ. ಇದರ ನಂತರ, ಯಾವುದೇ ಅಭ್ಯರ್ಥಿಯು ತನ್ನ ನಾಮಪತ್ರ ಹಿಂಪಡೆಯಲು ಬಯಸಿದರೆ ಅವರು ನವೆಂಬರ್ 15 ರವರೆಗೆ ಹಿಂಪಡೆಯಬಹುದು.