ಮಂಜುನಾಥ ಮಾಳಗಿ
ಕಲಘಟಗಿ : ಪ್ರಧಾನಿ ನರೇಂದ್ರ ಮೋದಿ ಅವರ ಕೈ ಸೇರಿದ್ದ ಕಲಘಟಗಿ ತೊಟ್ಟಿಲು ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. ಸರಣಿಕೆಗಳ 5ನೇ ವಾರ್ಷಿಕ ಹರಾಜಿನಲ್ಲಿ ಸ್ಥಾನ ಪಡೆದಿದೆ. ದೇಶದಲ್ಲಿ ಪ್ರಖ್ಯಾತಿ ಪಡೆದಿದ್ದ ತೊಟ್ಟಿಲು ಮತ್ತೊಮ್ಮೆ ತನ್ನ ವೀಶೇಷತೆ ಮೂಲಕ ದೇಶದ ಗಮನ ಸೆಳೆಯುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬಂದಿರುವ ಉಡುಗೊರೆಗಳನ್ನು ಹರಾಜು ಮಾಡಿ ಬಂದ ಹಣದಲ್ಲಿ ನಮಾಮಿ ಗಂಗೆ ಯೋಜನೆಯಡಿ ಪವಿತ್ರ ಗಂಗಾ ನದಿ ಪುನರುಜ್ಜಿವನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬಂದ ಉಡುಗೊರೆಯಲ್ಲಿ ಉತ್ತಮ ಸ್ಮರಣಿಕೆ ಆಯ್ಕೆ ಮಾಡಲಾಗಿದ್ದು, 912 ಸ್ಮರಣಿಕೆಗಳಲ್ಲಿ ಕಲಘಟಗಿ ತೊಟ್ಟಿಲು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.
ಧಾರವಾಡ ಜಿಲ್ಲೆಯಲ್ಲಿ ಮಾರ್ಚ್ 12, 2023ರಂದು ನಡೆದ ಐಐಟಿ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರು. ಕಲಾವಿದ ಶ್ರೀಧರ ಸಾವಕಾರ ಅವರು ತಯಾರಿಸಿದ ಕಲಘಟಗಿಯ ಪಾರಂಪರಿಕ ಹೆಮ್ಮೆಯ ಪ್ರತೀಕವಾದ ಕೆಮಿಕಲ್ ರಹಿತ ಬಣ್ಣದ ತೊಟ್ಟಿಲನ್ನು ಪ್ರಧಾನಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ಜಿಲ್ಲೆಯ ಸಂಸ್ಕೃತಿ ಬಿಂಬಿಸಲಾಯಿತು. ಈ ಬಾರಿಯ ಹರಾಜು ಪ್ರಕ್ರಿಯೆ ನವೆಂಬರ್ 15ರ ವರೆಗೆ ನಡೆಯಲಿದೆ.
ಈ ತೊಟ್ಟಿಲನ್ನು https://pmmementos.gov.in ದಲ್ಲಿ ಪ್ರೊಡಕ್ಟ್ ಕೋಡ್ 23A0617 ಎಂದು ನಮೂದಿಸಿ ಆಯ್ಕೆಮಾಡಿಕೊಳ್ಳಬಹುದು.