ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ. ಕೇವಲ 14ನೇ ವಯಸ್ಸಿನಲ್ಲಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಭಾರತ ಅಂಡರ್–19 ಏಕದಿನ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. 2026ರ ಅಂಡರ್–19 ವಿಶ್ವಕಪ್ಗೆ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಸರಣಿಗೆ ಬಿಸಿಸಿಐ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಐಪಿಎಲ್ನಿಂದಲೇ ದೇಶದ ಗಮನ ಸೆಳೆದ ವೈಭವ್, ತಮಗೆ ಸಿಕ್ಕ ಪ್ರತಿಯೊಂದು ಅವಕಾಶವನ್ನೂ ಶತಕಗಳ ಮೂಲಕ ಸದುಪಯೋಗಪಡಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ವೇಗದ ಶತಕ, ಅಂಡರ್–19 ಏಷ್ಯಾ ಕಪ್ ಹಾಗೂ ರೈಸಿಂಗ್ ಸ್ಟಾರ್ಸ್ ಟೂರ್ನಿಗಳಲ್ಲಿ ಸತತ ಸೆಂಚುರಿಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲೂ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಈ ತಂಡದ ನಿಯಮಿತ ನಾಯಕ ಆಯುಷ್ ಮ್ಹಾತ್ರೆ ಮಣಿಕಟ್ಟಿನ ಗಾಯದಿಂದ ವಿಶ್ರಾಂತಿಗೆ ತೆರಳಿರುವುದರಿಂದ, ಆಯ್ಕೆದಾರರು ವೈಭವ್ಗೆ ನಾಯಕತ್ವದ ಅವಕಾಶ ನೀಡಿದ್ದಾರೆ. ಭವಿಷ್ಯದ ನಾಯಕನನ್ನಾಗಿ ಅವರನ್ನು ರೂಪಿಸುವ ಉದ್ದೇಶದಿಂದ ಈ ಜವಾಬ್ದಾರಿ ನೀಡಲಾಗಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗಿದೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವೈಭವ್ ನಾಯಕತ್ವದ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ಈಗ ಎಲ್ಲರ ಕುತೂಹಲ.

