ಹೊಸದಿಗಂತ ವರದಿ, ಮೈಸೂರು:
ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಅಂಗೀಕರಿಸಿ ಜಾರಿಯಾದಾಗ ಮಾತ್ರ ಸರ್ವರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸಮಾನತೆಯ ದೊರೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಹಾಸನ-ಮೈಸೂರು ರಸ್ತೆಯ ಬಳಿ ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪುನರ್ ಚಾಲನೆ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ವರದಿ ಈವರೆಗೆ ಸರ್ಕಾರಕ್ಕೆ ಬಂದಿಲ. ಆದರೆ ಈಗಾಗಲೇ ಆ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ. ವರದಿಯನ್ನು ಸ್ವೀಕರಿಸಿದ ನಂತರ ಸಂಪುಟ ಸಭೆಯಲ್ಲಿ ಅದನ್ನು ಅನುಮೋದಿಸಿ ಸಾಧಕ ಮತ್ತು ಬಾಧಕಗಳನ್ನು ಪರಿಶೀಲಿಸಿ, ಎಲ್ಲರ ಸಲಹೆ ಮತ್ತು ಸಹಕಾರ ಪಡೆದು ಅನುಷ್ಠಾನಗೊಳಿಸಲು ನಿರ್ಧಾರ ಮಾಡಲಾಗುತ್ತದೆ ಎಂದರು.
ಸಮಾಜದಲ್ಲಿನ ಅಸಮಾನತೆ ತಡೆಯಲು ಜಾತಿ ಜನಗಣತಿ ಅತ್ಯಂತ ಅವಶ್ಯಕವಾಗಿದ್ದು ಈ ವಿಚಾರದಲ್ಲಿ ಎಲ್ಲರೂ ಪ್ರಜ್ಞಾವಂತರಾಗಿ ಚಿಂತನೆ ಮಾಡಬೇಕೆಂದ ಸಚಿವರು ಇಂತಹ ಸೂಕ್ಷ್ಮ ವಿಚಾರಗಳನ್ನು ಅನುಷ್ಠಾನ ಮತ್ತು ಜಾರಿ ಮಾಡುವಾಗ ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.