ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ವಿಶ್ವ ಕಪ್ ನೋಡಲು ಹೋಗಿದ್ದರಿಂದಲೇ ಭಾರತ ಸೋತಿತು, ಇಲ್ಲದಿದ್ದರೆ ವಿಶ್ವಕಪ್ ಗೆಲ್ಲುತ್ತಿತ್ತು ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ .
ಮೋದಿಯವರನ್ನು ಪನೌತಿ ಅಂದರೆ ಅಪಶಕುನ ಎನ್ನುವ ರೀತಿಯಲ್ಲಿ ಹೀಯಾಳಿಕೆ ಮಾಡಿದ್ದು, ಅವರಿಂದಲೇ ಭಾರತ ಸೋತಿತು ಎಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಟಿ ಕಂಗನಾ ರಣಾವತ್ ಕೆಂಡಾಮಂಡಲ ಆಗಿದ್ದಾರೆ.
ಪ್ರಧಾನಿ ಮೋದಿಯವರನ್ನು ಅಪಶಕುನ ಎಂದು ಕರೆದವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ನಟಿ, ಪ್ರಧಾನಿ ನರೇಂದ್ರ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ, ಅವರು ಎಂದಿಗೂ ಸೋಲಿಲ್ಲದ ಸರದಾರ ಎಂದಿದ್ದಾರೆ.
ಮೋದಿಯವರ ಆಡಳಿತದಲ್ಲಿ ಗುಜರಾತ್ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ. ಅವರು ಪ್ರಧಾನಿಯಾದ ಮೇಲೆ ಭಾರತದ ಆರ್ಥಿಕತೆಯು 4 ಟ್ರಿಲಿಯನ್ಗೆ ತಲುಪಿದೆ. ಹಲವು ದಶಕಗಳ ಕಾಲ ಆಡಳಿತ ನಡೆಸಿದ್ದರೂ ಭಾರತದ ಆರ್ಥಿಕತೆ 10ನೇ ಸ್ಥಾನದಲ್ಲಿತ್ತು. ಮೋದಿಯವರು ಪ್ರಧಾನಿಯಾದ ಕೆಲವೇ ವರ್ಷಗಳಿಂದ ಐದನೇ ಸ್ಥಾನಕ್ಕೆ ತಲುಪಿದ್ದು, ಯಾರಿಗೂ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿರುವ ನಟಿ, ರಾಜಕೀಯದ ದುರುದ್ದೇಶದಿಂದ ಇಂಥ ಕೀಳು ಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.