ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದು, ಈ ಸಾರ್ವಜನಿಕರು ಕೆಲ ವಿಚಿತ್ರ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ.
ಬೆಳಗಾವಿಯ ಅಥಣಿಯ ಅಶೋಕ್ ತಲವಾರ್ ಎಂಬವರು ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಊರಲ್ಲಿ ಇಂದಿರಾ ಗಾಂಧಿಯ ಪ್ರತಿಮೆ ಮಾಡಿಸಿದ್ದೇನೆ. ಅದನ್ನು ತೋರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಸಿಎಂ ಆಯ್ತಪ್ಪಾ ನೋಡೋಣ ಎಂದು ಹೇಳಿ ಕಳುಹಿಸಿದ್ದಾರೆ.
ಅದೇ ರೀತಿ ಜನಸ್ಪಂದನ ವೇಳೆ ಮೈಸೂರು ಜಿಲ್ಲೆಯ ಟಿ.ನರಸೀಪುರದ ಲಿಂಗಯ್ಯ ಎಂಬವರು 2028ಕ್ಕೆ ನೀನೇ ಸಿಎಂ ಆಗಬೇಕು. ನಿಮ್ಮನ್ನು ಬಿಟ್ಟು ಬೇರೆ ಯಾರಿಗೂ ರಾಜ್ಯವನ್ನು ಆಳ್ವಿಕೆ ಮಾಡಲು ಆಗುವುದಿಲ್ಲ. 35 ವರ್ಷದಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಅಳಿಯ ಶಿವಣ್ಣ ಎಂಬವರಿಗೆ ಮೈಸೂರು ಜಿಲ್ಲೆಯ ಯಾವುದಾದರೊಂದು ಸಮಿತಿಗೆ ಸದಸ್ಯರನ್ನಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಇದೇ ವೇಳೆ ಆರು ತಿಂಗಳ ಮಗುವಿಗೆ ಹೃದಯದಲ್ಲಿ ರಂದ್ರ ಇರುವುದಾಗಿ ಸಿಎಂ ಮುಂದೆ ಗದಗ ಮೂಲದ ಅಂಜಲಿಯವರು, ಮಗು ಮೇಘಶ್ರೀ ಚಿಕಿತ್ಸೆಗಾಗಿ ಹಣ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ಮಂಜೂರು ಮಾಡಿದರು. ಮೂರು ಆಪರೇಷನ್ ಆಗಿದ್ದು, ಮತ್ತೊಂದು ಆಪರೇಷನ್ ಆಗಬೇಕಿದೆ. ಮಗು ನಾಲ್ಕು ತಿಂಗಳದ್ದಾಗಿನಿಂದಲೇ ಆಪರೇಷನ್ ಮಾಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ನಿವೇಶನ ಹಂಚಿಕೆಗಾಗಿ ಅಲೆದಾಟ : ಹಿರಿಯ ನಾಗರಿಕ ಸುಬ್ರಮಣ್ಯಂ ಸಿಎಸ್ ಎಂಬವರು ವಿಶ್ವಭಾರತಿ ಸೊಸೈಟಿಯಲ್ಲಿ ನಿವೇಶನ ಹಂಚಿಕೆಯಾದರೂ ನಿವೇಶನ ಸಿಗದೇ ಅಲೆದಾಟ ಮಾಡುತ್ತಿರುವುದಾಗಿ ತಮ್ಮ ನೋವನ್ನು ಹೇಳಿಕೊಂಡರು. 30 ವರ್ಷದಿಂದ ನಿವೇಶನಕ್ಕಾಗಿ ಅಲೆದಾಟ ಮಾಡುತ್ತಿದ್ದೇನೆ. ಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ನೀಡಿದರೂ ಇನ್ನೂ ನಿವೇಶನ ನಮಗೆ ಸಿಕ್ಕಿಲ್ಲ. ಆ ನಿವೇಶನದಲ್ಲಿ ಬೇರೆಯವರು ಮನೆ ಕಟ್ಟಿದ್ದಾರೆ ಎಂದು ದೂರು ನೀಡಿದರು. ಸಿಎಂ ಬಿಡಿಎ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದಾರೆ.
ತಿಪಟೂರು ಮೂಲದ ಮಹದೇವಮ್ಮ ಎಂಬ ಮಹಿಳೆ ಸಿಎಂ ಮುಂದೆ ಬಂದು, ಮಗ ಎಲ್ಲಾ ಆಸ್ತಿ ಬರೆಸಿಕೊಂಡು ನನ್ನನ್ನು ಹೊರ ಹಾಕಿದ್ದಾನೆ. ಎಸಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪೊಲೀಸರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸಿಎಂ ತುಮಕೂರು ಡಿಸಿಗೆ ಸೂಚನೆ ನೀಡಿದರು.