ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಜಾರಿ ಮಾಡಿ: ಎಸ್.ಜಯಪ್ರಕಾಶ್ ಆಗ್ರಹ

ಹೊಸದಿಗಂತ ವರದಿ,ಮೈಸೂರು:

ಸರ್ಕಾರದ ಹಾಗೂ ಖಾಸಗಿ ಸಂಸ್ಥೆಗಳಲ್ಲಿರುವ ಉನ್ನರ ಸ್ತರದ ಹುದ್ದೆಗಳಲ್ಲಿ ಕನ್ನಡಿಗರನ್ನು ಹೆಚ್ಚಾಗಿ ನೇಮಕ ಮಾಡಬೇಕು, ಆ ಮೂಲಕ ಕನ್ನಡಿಗರಿಗೆ ಹೆಚ್ಚಿನ ಸ್ಥಾನ, ಮಾನಗಳನ್ನು ನೀಡಬೇಕು ಎಂದು ಚಿತ್ರ ನಟ ಹಾಗೂ ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್ (ಜೆಪಿ) ಆಗ್ರಹಿಸಿದರು.

ಸೋಮವಾರ ಮೈಸೂರಿನ ಶ್ರೀ ಚಿತ್ರಮಂದಿರ ವೃತ್ತದಲ್ಲಿರುವ ಶ್ರೀ ಕನ್ನಡ ಕಲಾಜ್ಯೋತಿ ಗೆಳೆಯರ ಬಳಗವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ ಸಂದರ್ಭದಲ್ಲಿ ನೇತ್ರದಾನ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಉನ್ನತ ಹುದ್ದೆಗಳಲ್ಲಿ ಹಾಗೂ ಖಾಸಗಿ ಸಂಸ್ಥೆ, ಕಂಪನಿಗಳಲ್ಲಿರುವ ಉನ್ನತ ಹುದ್ದೆಗಳಲ್ಲಿ ಹೆಚ್ಚಾಗಿ ಪರಭಾಷಿಗರೇ ನೇಮಕಗೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ನೆಪಮಾತ್ರಕ್ಕೆ ಕನ್ನಡಿಗರನ್ನು ಕೆಳಸ್ತರದ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದ್ದಾರೆ.
ಇದರಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಸೂಕ್ತ ಸ್ಥಾನ,ಮಾನಗಳು ಸಿಗದಂತಾಗಿದೆ. ಇಂತಹ ಪರಿಸ್ಥಿತಿ ಹೋಗಬೇಕಾಗಿದೆ. ಪ್ರತಿಭಾವಂತ, ಜ್ಞಾನವಂತ, ಎಲ್ಲರೊಂದಿಗೆ ಸ್ಪರ್ಧಿಸಬಲ್ಲ ತಾಕತ್ತು ಇರುವ ಅನೇಕ ಕನ್ನಡಿಗರು ಇದ್ದಾರೆ. ಅಂತಹವರಿಗೆ ಅವಕಾಶಗಳನ್ನು, ಉನ್ನತ ಹುದ್ದೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಹಲವು ದಶಕಗಳಿಂದಲೂ ಕನ್ನಡಿಗರು ಸರೋಜನಿ ಮಹಿಷಿ ವರದಿ ಜಾರಿಯಾಗಬೇಕೆಂದು ಹೋರಾಟ ಮಾಡುತ್ತಲೇ, ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ನಮ್ಮನ್ನಾಳಿದ ಸರ್ಕಾರಗಳು ಮಾತ್ರ ಈ ಒಂದು ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸುವಂತಹ ಯಾವುದೇ ಪ್ರಾಮಾಣಿಕ ಪ್ರಯತ್ನವನ್ನು ಮಾಡಿಲ್ಲ. ಇದಕ್ಕೆ ಸರ್ಕಾರ ನಡೆಸುತ್ತಿದ್ದವರಿಗೆ ಇಚ್ಚಾಶಕ್ತಿಯಿಲ್ಲದಿದ್ದೇ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಅಪ್ಪಟ ಕನ್ನಡಿಗ ಎಂದು ಹೇಳಿಕೊಳ್ಳುತ್ತಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿಯೂ ಅವರು ಕೆಲಸ ನಿರ್ವಹಿಸಿದ್ದರು. ಈಗ ಅವರು ಈ ರಾಜ್ಯಕ್ಕೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡಿಗರ ಬಗ್ಗೆ ನಿಜಕ್ಕೂ ಅವರಿಗೆ ಕಾಳಜಿಯಿದ್ದರೆ ಕೂಡಲೇ ಸರೋಜನಿ ಮಹಿಷಿ ವರದಿಯನ್ನು ಜಾರಿಗೆ ತರಲಿ. ಆ ಮೂಲಕ ಕನ್ನಡ ನಾಡಿನ, ಕನ್ನಡಿಗರ ಬಗ್ಗೆ ಇರುವ ತಮ್ಮ ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.

ರಾಜ್ಯದ ರಾಜಧಾನಿಯಲ್ಲಿ ಪರಭಾಷಿಕರ ಹಾವಳಿಯಿಂದಾಗಿ ಕನ್ನಡ ಭಾಷೆ, ಕನ್ನಡಿಗರು ನಲಗಿ ಹೋಗಿ, ತಮ್ಮದೇ ನೆಲದಲ್ಲಿ ಪರಕೀಯರಂತಾಗುತ್ತಿದ್ದಾರೆ. ಹಾಗಾಗಿ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪರಭಾಷಿಕರ ಹಾವಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಕನ್ನಡ ಭಾಷೆಗೆ, ಕನ್ನಡಿಗರಿಗೆ ಎಲ್ಲದರಲ್ಲೂ ಮೊದಲ ಆದ್ಯತೆ ಎಂಬ ಕಾನೂನು, ನಿಯಮಗಳನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಎರಡು ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಕನ್ನಡ ನಾಡಿನ ನೆಲ ಜಲ ಮತ್ತು ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡ ಪರ ಸಂಘಟನೆಗಳ ಸದಸ್ಯರುಗಳು ಹೋರಾಟ ನಡೆಸಬೇಕೆಂದು ಕರೆ ನೀಡಿದರು ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪ್ರಶಾಂತ್ ಗೌಡ, ವಿಜಯ್, ಜಾಕಿ ,ವೇಣು, ಚಂದ್ರು, ರವೀಂದ್ರನಾಥ್, ಸದಾಶಿವ, ನಾರಾಯಣ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!