ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಮೆಂಟ್ ಸಿಮೆಂಟ್ ಬಲ್ಕರ್ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ತಾಲೂಕಿನ ನಾಯಕರಂಡನಹಳ್ಳಿ ಬಳಿ ನಡೆದಿದೆ.
ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಕಾರಣ ಹಿಂಬದಿ ಇದ್ದ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಅಶೋಕ್ ಮತ್ತು ಪವನ್ ಕುಮಾರ್ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮೂಲತಹ ಹಿಂದೂಪುರದವರಾದ ಅಶೋಕ್ ಮತ್ತು ಪವನ್ ಕುಮಾರ್ ವೀಕೆಂಡ್ ಅಂತ ಊರಿಗೆ ಬಂದಿದ್ದು ಗ್ರಾಮದಲ್ಲಿ ಕಾಲ ಕಳೆದಿದ್ದರು. ಪವನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕಾರಣ ತನಗೆ ಆಫೀಸ್ಗೆ ತೆರಳಲು ಬಸ್ ಸಿಗಲ್ಲ ಅಂತ ಬಾಮೈದ ಅಶೋಕನಿಗೆ ಡ್ರಾಪ್ ಕೊಡಲು ಹೇಳಿದ್ದ.
ಹೀಗಾಗಿ ಬೈಕ್ನಲ್ಲಿ ಹಿಂದೂಪುರದಿಂದ ಯಲಹಂಕದ ಕಡೆ ಇವರಿಬ್ಬರು ಹೊರಟಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ಇವರು ಬರುತ್ತಿದ್ದಾಗ ರಸ್ತೆಯಲ್ಲಿ ಮುಂದೆ ಸಾಗ್ತಿದ್ದ ಸಿಮೆಂಟ್ ಬಲ್ಕರ್ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆ ಸ್ಥಳೀಯರು ಗಾಯಾಳುಗಳನ್ನ ರಕ್ಷಿಸಿ ಆಸ್ವತ್ರೆಗೆ ದಾಖಲಿಸುವ ಯತ್ನ ಮಾಡಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಕಾರಣ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಘಟನೆ ಬಳಿಕ ಲಾರಿ ಚಾಲಕ ಎಸ್ಕೇಪ್ ಆಗಿದ್ದು, ಮನೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಿಮೆಂಟ್ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ಭಾವ, ಬಾಮೈದ ದುರ್ಮರಣ

