ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರೊಂದು ಟ್ರಕ್ ಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಘಟನೆ ಉತ್ತರ ಪ್ರದೇಶದ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದಿದ್ದು, ಒಂದು ಮಗು ಸಹಿತ ಎಂಟು ಮಂದಿ ಈ ಅವಘಡದಲ್ಲಿ ಸಜೀವ ದಹನಗೊಂಡಿದ್ದಾರೆ.
ಉತ್ತರಾಖಂಡದ ಕಿಚ್ಚಾದಿಂದ ಮರಳು ಹಾಗೂ ಜಲ್ಲಿ ಸಾಗಾಟ ನಡೆಸುತ್ತಿದ್ದ ಟ್ರಕ್ ಭೋಜಿಪುರ ಸಮೀಪ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಕಾರಿಗೆ ಹಠಾತ್ ಬೆಂಕಿ ಹತ್ತಿಕೊಂಡಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಭಾರೀ ಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅದರೆ ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದಾಗಿ ಕಾರಿನ ಒಳಗಿದ್ದವರು ಹೊರಗೆ ಬರಲಾರದೆ ಆ ವೇಳೆಗಾಗಲೇ ಸುಟ್ಟು ಕರಕಲಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.