ಹೊಸದಿಗಂತ ವರದಿ ಮೈಸೂರು:
ಸಂಸತ್ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ 141 ಸಂಸದರನ್ನ ಅಮಾನತುಗೊಳಿಸಿರುವುದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಒತ್ತಾಯಿಸಿದರು.
ಬುಧವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಕಿಡಿಗೇಡಿಗಳು ಸಂಸತ್ನ ಕಲಾಪದ ಒಳಗೆ ನುಗ್ಗಿದ್ದಾರೆ. ಇದರ ಹಿಂದೆ ಯಾರಿದ್ದಾರೆ.? ಅದನ್ನ ಕೇಳಲು ಹೋದರೆ ಸಂಸದರನ್ನು ಅಮಾನತು ಮಾಡಿದ್ದಾರೆ. ಹಾಗಾದರೇ ಸಂಸತ್ ಇರೋದು ಯಾಕೇ.? ಸಂಸತ್ ಚರ್ಚೆ ಮಾಡಲಿಕ್ಕೆ ಇರುವ ಒಂದು ವೇದಿಕೆ. ಪ್ರತಿಪಕ್ಷ ಇರುವುದೇ ಪ್ರಶ್ನೆ ಮಾಡಲು. ಆಡಳಿತ ಪಕ್ಷ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಇರಬೇಕು. ಈ ರೀತಿಯ ಎಂದು ಆಗಿರಲಿಲ್ಲ. ಸಂಸತ್ತಿನ ವ್ಯವಹಾರ ಮಂತ್ರಿಗಳಿಗೆ ಯಾಕೆ ಇದು ಅರ್ಥ ಆಗಲಿಲ್ಲ. 141 ಸಂಸದರನ್ನು ಅಮಾನತು ಮಾಡಿದ್ದು ಸಂಸತ್ತಿಗೆ ಮಾಡಿದ ದೊಡ್ಡ ದ್ರೋಹ ಎಂದು ಕಿಡಿಕಾರಿದರು. ಈ ಘಟನೆಯಿಂದಾಗಿ
ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ. ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ.? ಇದು ನಮ್ಮ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. ಹಾಗಾಗಿ 141 ಜನರ ಅಮಾನತನ್ನ ವಾಪಸ್ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳ ನಡೆಯಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಧಾನಿಯಾದರೆ ಸ್ವಾಗತ;
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ದೇಶದ ಪ್ರಧಾನಿಯಾದರೆ ನಾನು ಸ್ವಾಗತಿಸುತ್ತೇನೆ. ಅವರು ಪ್ರಧಾನ ಮಂತ್ರಿಯಾಗಲು ಸಮರ್ಥವಾಗಿರುವ ವ್ಯಕ್ತಿ. ಸಾಮಾನ್ಯ ವ್ಯಕ್ತಿಯ ಮಗನಾಗಿ ದೊಡ್ಡ ರಾಜಕಾರಣಿಯಾಗಿ ಬೆಳೆದು ಇಂದು ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಶೋಷಿತ ಸಮುದಾಯಗಳಿಂದ ಬಂದ ಇಂತಹ ನಾಯಕರು ಪ್ರಧಾನಮಂತ್ರಿ ಆಗಬೇಕು ಎಂದರು.
ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿಯವರು ಶ್ರೀರಾಮಮಂದಿರ ಹೋರಾಟದಲ್ಲಿ ಮುಂದಿದ್ದ ನಾಯಕ. ವಯಸ್ಸಿನ ಕಾರಣಕ್ಕೆ ಅವರನ್ನು ದೂರವಿಟ್ಟು ಶ್ರೀ ರಾಮಮಂದಿರ ಉದ್ಘಾಟನೆ ಮಾಡೋದು ತಪುö್ಪ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ವಯಸ್ಸಾಗಿದೆ. ಆದರೂ ಅವರನ್ನು ಕರೆದಿದ್ದಾರೆ. ಈ ಕಾರ್ಯಕ್ರಮಕ್ಕೆ ಅಡ್ವಾಣಿ ಬಂದ್ರೆ ಕ್ರೆಡಿಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಿಗಲ್ಲ. ಹಾಗಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.