ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Ram Lalla Pran Pratishtha) ಅಯೋಧ್ಯೆ ನಗರ ಸಿಂಗಾರಗೊಳ್ಳುತ್ತಿದೆ. ಜೊತೆಗೆ ದೇಶದ ಮೂಲೆ ಮೂಲೆಯಿಂದ ಗಣ್ಯಾತಿಗಣ್ಯರ ಆಗಮನಕ್ಕೆ ಅಹ್ವಾನ ನೀಡಲಾಗುತ್ತಿದೆ.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರಿಗೂ ಆಹ್ವಾನ ನೀಡಲಾಗಿದೆ. ಈ ಮೂಲಕ ಕ್ರೀಡಾಕ್ಷೇತ್ರದ ಗಮನವನ್ನೂ ಸೆಳೆಯಲಾಗಿದೆ. ಟೀಂ ಇಂಡಿಯಾದ ಉತ್ತಮ ಬೌಲರ್ಗಳ ಪೈಕಿ ವೆಂಕಟೇಶ್ ಪ್ರಸಾದ್ ಸಹ ಒಬ್ಬರು. ಭಾರತದ ಪರ ಆಡಿದ 33 ಟೆಸ್ಟ್ ಪಂದ್ಯಗಳಲ್ಲಿ 96 ವಿಕೆಟ್ ಹಾಗೂ 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್ ಪಡೆದು ಸಾಧನೆ ಮಾಡಿರುವುದಲ್ಲದೇ ಏಕದಿನ ವಿಶ್ವಕಪ್ ಟೂರ್ನಿಯ ಹಲವು ಪಂದ್ಯಗಳಲ್ಲಿ ದಾಖಲೆಗಳನ್ನ ಮಾಡಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಂದಿರ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಗೆ ಆಹ್ವಾನ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.
ನನ್ನ ಜೀವಿತಾವಧಿಯಲ್ಲಿ ಶ್ರೀರಾಮಮಂದಿರದ ನಿರ್ಮಾಣವಾಗುವ ಭರವಸೆ ಮತ್ತು ಬಯಕೆ ಇತ್ತು. ಇದು ಎಂತಹ ಕ್ಷಣ. ಜನವರಿ 22ರಂದು ಶಂಕುಸ್ಥಾಪನೆ ಮಾತ್ರ ನಡೆಯುತ್ತಿಲ್ಲ. ಭಾರತದ ಶ್ರೇಷ್ಠ ಕ್ಷಣದಲ್ಲಿ ಪಾಲ್ಗೊಳ್ಳುವ ದೊಡ್ಡ ಅದೃಷ್ಟ ಮತ್ತು ಆಶೀರ್ವಾದ ನನಗೆ ಸಿಕ್ಕಿದೆ. ನನ್ನ ಜೀವಮಾನದಲ್ಲಿಯೂ ಮಾತ್ರವಲ್ಲದೇ ಭಾರತದ ಅತ್ಯಂತ ವಿಶೇಷ ಕ್ಷಣವಿದು. ಆಹ್ವಾನಕ್ಕಾಗಿ ಧನ್ಯವಾದಗಳು. ಜೈ ಶ್ರೀ ರಾಮ್ ಎಂದು ವೆಂಕಟೇಶ್ ಪ್ರಸಾದ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಜನವರಿ 22 ರಂದು ಪ್ರಾಣ ಪ್ರತಿಷ್ಠೆಗೆ 4000 ಸಂತರಿಗೆ ಆಹ್ವಾನಿಸಲಾಗಿದ್ದು, ಭಾರತದ ಎಲ್ಲಾ ಸಂಪ್ರದಾಯಗಳ ಸಂತರನ್ನು ಆಹ್ವಾನಿಸಲಾಗಿದೆ. ಅಂಡಮಾನ್ ನಿಕೋಬಾರ್ ಕರಾವಳಿಯಲ್ಲಿ ವಾಸಿಸುವ ಧಾರ್ಮಿಕ ಮುಖಂಡರು, ಜಾರ್ಖಂಡ್ನ ಬನವಾಸಿ ಪ್ರದೇಶದ ಧಾರ್ಮಿಕ ಮುಖಂಡರು ಮತ್ತು 125 ಸಂತ ಸಂಪ್ರದಾಯಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ.