ಕಾಂಗ್ರೆಸ್ ಪಕ್ಷದಿಂದ ಒಡೆದಾಳುವ ನೀತಿ: ವಿಜಯೇಂದ್ರ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ನೂರಾರು ವರ್ಷಗಳ ಕಾಲ ನಮ್ಮ ದೇಶವನ್ನು ಆಡಳಿತ ನಡೆಸಿದ ಬ್ರಿಟಿಷರು ಕಾಂಗ್ರೆಸ್ ಪಕ್ಷಕ್ಕೆ ‘ಒಡಕನ್ನು ಮೂಡಿಸಿ ಆಡಳಿತ ನಡೆಸುವ ನೀತಿ’ಯನ್ನು ಕೊಟ್ಟು ಹೋಗಿದ್ದಾರೆ. ಕಾಂಗ್ರೆಸ್ಸಿಗರು ಅದರ ದುರುಪಯೋಗವನ್ನು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ‘ಬಲವರ್ಧನೆಗಾಗಿ ಭೀಮ ಸಮಾವೇಶ’ದಲ್ಲಿ ಅವರು ಮಾತನಾಡಿದರು. ಇದೊಂದು ಚಿಂತನ ಮಂಥನ ಕಾರ್ಯಕ್ರಮ ಎಂದರು. ನೆಹರೂ 17 ವರ್ಷ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಸೇರಿ ಕಾಂಗ್ರೆಸ್ ಪಕ್ಷವು 55- 60 ವರ್ಷ ದೇಶವನ್ನಾಳಿದೆ. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನೆಹರೂ ಕುಟುಂಬದ ಹಾಗೂ ಕಾಂಗ್ರೆಸ್‍ನ ರಬ್ಬರ್ ಸ್ಟಾಂಪ್ ಆಗಿದ್ದರು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಗರೀಬಿ ಹಠಾವೋ ಮೂಲಕ ದಲಿತರ ಏಳಿಗೆ ಆಗಲಿಲ್ಲ. ಬಾಬಾಸಾಹೇಬರ ಹೆಸರು ಹೇಳಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷವು ಹಿಂದೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ಅವರ ಅಂತ್ಯಸಂಸ್ಕಾರಕ್ಕೆ ಸ್ಥಳವನ್ನೂ ಕೊಟ್ಟಿರಲಿಲ್ಲ ಎಂದು ಆಕ್ಷೇಪಿಸಿದರು. ದಲಿತರನ್ನು ಓಟ್ ಬ್ಯಾಂಕ್ ಆಗಿ ಕಾಂಗ್ರೆಸ್ ಬಳಸಿಕೊಂಡಿತ್ತು ಎಂದು ದೂರಿದರು.

400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷದ ಸಂಸದರ ಸ್ಥಾನ 44ಕ್ಕೆ ಇಳಿದಿದೆ. ಮತದಾರರು ಒಂದು ಬಾರಿ ಮೋಸ ಹೋಗಬಹುದು; ಎರಡು ಬಾರಿ ಮೋಸ ಹೋಗಬಹುದು. ಪದೇಪದೇ ಮೋಸ ಹೋಗುವುದಿಲ್ಲ ಎಂಬುದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಪಕ್ಷದ ಬೂಟಾಟಿಕೆಯ, ಮೋಸಗಾರಿಕೆಯ ರಾಜಕಾರಣವನ್ನು ಪ್ರಜ್ಞಾವಂತ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು.
ಬಾಬಾಸಾಹೇಬರಿಗೆ ಪಂಚಕ್ಷೇತ್ರಗಳ ಅಭಿವೃದ್ಧಿ ಮೂಲಕ ನೈಜ ಗೌರವ ನೀಡಿದವರು ಮೋದಿಜೀ ಎಂದು ವಿವರಿಸಿದರು. ಯಡಿಯೂರಪ್ಪ, ಬೊಮ್ಮಾಯಿ, ಸದಾನಂದಗೌಡ ಅವರು ಸಿಎಂ ಆಗಿದ್ದಾಗ ದಲಿತ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ದಲಿತರಿಗೆ ಅನ್ಯಾಯ ಮಾಡಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮನವಿ ಮಾಡಿದರು.

ಬಿಜೆಪಿ ಕೇವಲ ಚುನಾವಣೆಗೆ ಸೀಮಿತವಾಗಿ ರಾಜಕಾರಣ ಮಾಡುವುದಿಲ್ಲ. ದಲಿತರಿಗೆ ನ್ಯಾಯ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ತಲುಪಿಸುವ ನರೇಂದ್ರ ಮೋದಿಜೀ ಅವರ ಕನಸನ್ನು ನನಸು ಮಾಡಬೇಕು ಎಂದು ತಿಳಿಸಿದರು. ವಿಕಸಿತ ಭಾರತಕ್ಕಾಗಿ ಮೋದಿಜೀ ಅವರು ತಪಸ್ಸಿನ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

50-60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ಸಿನಿಂದ ಕಾಂಗ್ರೆಸ್ ಮುಖಂಡರ ಗರೀಬಿ ಹಠಾವೋ ಆಗಿದೆ. ಜನರು ದಡ್ಡರಿದ್ದರೆ ಮಾತ್ರ ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯ. ಮತ್ತೆ ಜನರನ್ನು ಮೂರ್ಖರನ್ನಾಗಿ ಮಾಡಲು ಗ್ಯಾರಂಟಿಯ ಹುನ್ನಾರವನ್ನು ಅದು ಜನರ ಮುಂದಿಟ್ಟಿದೆ ಎಂದು ಟೀಕಿಸಿದರು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕಾಂಗ್ರೆಸ್ ದುರಾಡಳಿತದ ವಿರುದ್ಧ ಎಚ್ಚತ್ತು ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡಲು ಪ್ರಯತ್ನಿಸಬೇಕು ಎಂದು ವಿನಂತಿಸಿದರು.

ಎಸ್‍ಸಿ ಮೋರ್ಚಾ ನೂತನ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜು ಅವರು ಮಾತನಾಡಿ, ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಶ್ರಮಿಸುವಂತೆ ಮನವಿ ಮಾಡಿದರು.

ಸ್ವಾಭಿಮಾನಿ ಸಮಾವೇಶದ ಲೋಗೊವನ್ನು ಎಲ್ಲರೂ ಮೊಬೈಲ್ ಡಿ.ಪಿ.ಆಗಿ ಬಳಸಲು ಕೋರಲಾಯಿತು. ವಾದಿರಾಜ್ ಅವರು, ನರೇಂದ್ರ ಮೋದಿಜೀ ಅವರ ಸರಕಾರವು ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ ಪಂಚತೀರ್ಥಗಳ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು. ರಾಜ್ಯ ಬಿಜೆಪಿ ಸರಕಾರದಿಂದ ಅಂಬೇಡ್ಕರರು ರಾಜ್ಯದಲ್ಲಿ ಭೇಟಿ ಕೊಟ್ಟಿದ್ದ ಮತ್ತು ಪಾದಸ್ಪರ್ಶ ಮಾಡಿದ್ದ ಸ್ಥಳಗಳ ಅಭಿವೃದ್ಧಿ ಸಂಕಲ್ಪ ಕುರಿತು ತಿಳಿಸಲಾಯಿತು. ಮೋದಿಯವರು ಡಾ. ಅಂಬೇಡ್ಕರ್ ಅವರನ್ನು ಬಾಬಾಸಾಹೇಬ ಎಂದು ಮನದಾಳದಿಂದ ಹೇಳುತ್ತಿದ್ದುದನ್ನು ನೆನಪಿಸಲಾಯಿತು.

ಸಂಸದ ಮುನಿಸ್ವಾಮಿ, ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯದ ಮಾಜಿ ಉಪಾಧ್ಯಕ್ಷ ಇ.ಅಶ್ವತ್ಥನಾರಾಯಣ್, ಎಸ್‍ಸಿ ಮೋರ್ಚಾ ಹಿಂದಿನ ಅಧ್ಯಕ್ಷ ಮುನಿಕೃಷ್ಣ, ಮುಖಂಡರಾದ ಸಂಪಂಗಿ, ಬಾಲರಾಜು, ಚಿ.ನಾ.ರಾಮು, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಹೇಶ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕುಡಚಿ ರಾಜೀವ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here