ಹೊಸದಿಗಂತ ವರದಿ ಹಾವೇರಿ:
ಬಂಕಾಪುರ ಪೊಲೀಸ ಠಾಣೆ ವ್ಯಾಪ್ತಿಯ ಬಂಕಾಪೂರ ಶಹರದಲ್ಲಿ ಜ.5ರಂದು ವಿವಿದೆಡೆ ಶ್ರೀಗಂಧದ ಮರಗಳನ್ನು ರಾತ್ರಿ ವೇಳೆಯಲ್ಲಿ ಕಟ್ ಮಾಡಿ ಕಳ್ಳತನದಿಂದ ಸಾಗಾಟ ಮಾಡಿದ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಂತರ್ ಜಿಲ್ಲಾ ಶ್ರೀಗಂಧದ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ. ಅಲ್ಲದೇ ಹಲವರು ಸೇರಿ ಈ ಕೃತ್ಯ ಎಸಗಿರುವುದು ಕಂಡು ಬಂದಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ಸೈಯದ್ ಇಸ್ರಾರ್ ತಂದೆ ಸೈಯದ್ ಕರೀಮ್ ಬಂಧಿತ ವ್ಯಕ್ತಿ. ಈ ವೇಳೆ ಒಟ್ಟು 102 ಕೆಜಿ 400 ಗ್ರಾಂ ತೂಕದ ಶ್ರೀಗಂಧದ ತುಂಡುಗಳು ಅದರ ಅಂದಾಜು ಮೊತ್ತ 2.48ಲಕ್ಷ ಇದ್ದು, ಕರ್ನಾಟಕ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕೃತ್ಯಕ್ಕೆ ಉಪಯೋಗಿಸಿದ ಒಂದು ಬಿಳಿ ಬಣ್ಣದ ಸ್ಯಾಂಟ್ರೋ ಕಂಪನಿಯ ಕಾರ, 3 ಕಬ್ಬಿಣದ ಕಂದೀಲುಗಳು, 2 ಪಟ್ಟಿ ಕೈ ಗರಗಸಗಳು ಇವುಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತನಾದ ಸೈಯದ್ ಇಸ್ರಾರ್ ಈತನು ಹಾವೇರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವಾರು ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಹಲವಾರು 20 ಕ್ಕು ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಸೆರೆವಾಸ ಶಿಕ್ಷೆಗೆ ಒಳಪಟ್ಟು ಶಿಕ್ಷೆ ಅನುಭವಿಸಿ ಇತ್ತೀಚೆಗೆ ಜೈಲಿನಿಂದ ಹೊರಬಂದು ಮತ್ತೆ ಶ್ರೀಗಂಧ ಕಳ್ಳತನದಲ್ಲಿ ಭಾಗಿಯಾಗಿದ್ದನು. ಈತ ಮತ್ತು ಸಹಚರರು ಶ್ರೀಗಂಧದ ಮರಗಳ ಕಳ್ಳತನ ಮತ್ತು ಸಾಗಣೆಯನ್ನೆ ವೃತ್ತಿ ಮಾಡಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ರೀಗಂಧದ ಮರಗಳ ಕಳ್ಳತನ
ಪತ್ತೆಗೆ ಎಸ್ಪಿ ಅಂಶುಕುಮಾರ, ಎಎಸ್ಪಿ ಸಿ. ಗೋಪಾಲ, ಪ್ರಭಾರ ಡಿ.ಎಸ್.ಪಿ. ಎಂ. ಎಸ್. ಪಾಟೀಲ್, ಶಿಗ್ಗಾಂವ ಪ್ರಭಾರ ಸಿಪಿಐ ಸತ್ಯಪ್ಪ ಮಾಳಗೊಂಡ, ಪಿಎಸ್ಐ ನಿಂಗರಾಜ ಕರಕರಣ್ಣವರ ನೇತೃತ್ವದಲ್ಲಿ ತಂಡವು ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ಮಾಡಿದ ಶ್ರೀಗಂಧವನ್ನು ವಶಪಡಿಸಿಕೊಂಡು ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಪ್ರಕರಣದ ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.