ಹೊಸ ದಿಗಂತ ವರದಿ, ಬೇಲೂರು:
ನಾನು, ನನ್ನ ಕುಟುಂಬದವರು ಯಾರಿಗೂ ಅನ್ಯಾಯ ಮಾಡಿಲ್ಲ. ಜಾತ್ಯಾತೀತವಾಗಿಯೇ ಜೀವನವಿಡೀ ರಾಜಕಾರಣ ಮಾಡಿದ್ದು, ಈಗ ಅನಿವಾರ್ಯವಾಗಿ ಮಾರ್ಪಾಡು ಮಾಡಿಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಚುನಾಯಿತ ಸದಸ್ಯರು ಹಾಗು ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾನೇ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಕೆಲವರು ಅಪೇಕ್ಷೆ ಪಡುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ವ್ಹೀಲ್ ಚೇರ್ನಲ್ಲಿ ಬಂದು ಚನ್ನಕೇಶವನ ದರ್ಶನ ಪಡೆದಿದ್ದೇನೆ. ನನ್ನ ಮೊಮ್ಮಗನಿಗೋಸ್ಕರ ನಾನು ಇಲ್ಲಿಗೆ ಬಂದಿಲ್ಲ. ಜಿಲ್ಲೆಯ ಜನರ ದೃಷ್ಟಿಯಿಂದ ನಿಮ್ಮ ಬಳಿ ಬಂದಿದ್ದೇನೆ. ನಿಮ್ಮ ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಜಾತ್ಯಾತೀತ ತತ್ವದಡಿ ಕೆಲಸ ಮಾಡಿದ್ದರೂ ಕೊನೆಯ ಘಟ್ಟದಲ್ಲಿ ಏಕೆ ಮಾರ್ಪಾಡು ಮಾಡಿಕೊಂಡಿರಿ ಎಂದು ಹಲವರು ಕೇಳುತ್ತಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆ ನಡುವೆ ಅದು ಅನಿವಾರ್ಯವಾಗಿತ್ತು ಎಂದು ಜೆಡಿಎಸ್-ಬಿಜೆಪಿ ಮೈತ್ರಿ ಸಮರ್ಥೀಸಿಕೊಂಡರು.
ದೇವೇಗೌಡರು ದೇವೇಗೌಡರ ಮಕ್ಕಳು ಯಾರಿಗೆ ಅನ್ಯಾಯ ಮಾಡಿದಿವಿ ಹೇಳಿ. ನಾವು ರೈತರ ಮಕ್ಕಳು. ನಿಮ್ಮನ್ನು ಬಿಟ್ಟು ನಾವು ಎಲ್ಲಿಗೆ ಹೋಗಲು ಸಾಧ್ಯ. ಈ ದೇಶದಲ್ಲಿ ಕಾಂಗ್ರೆಸ್ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ. ಯಾರಿಗೆ ಅನ್ಯಾಯ ಮಾಡಿದ್ದೇನೆ ಎಂದು ಹೇಳಲಿ. ಮುಸಲ್ಮಾನರ ರಕ್ಷಣೆಗಾಗಿ ನಾವು ಸದಾ ಬದ್ಧರಾಗಿದ್ದೇವೆ. ಅವರು ನನ್ನ ಸಹೋದರರೆಂದು ಭಾವಿಸಿದ್ದು ಮೀಸಲಾತಿ ಒದಗಿಸಲು ದೇಹವನ್ನೇ ಸವೆಸಿದ್ದೇನೆ ಎಂದರು.
ಯಾರೋ ಒಬ್ಬ ಅನವಶ್ಯಕವಾಗಿ ರೇವಣ್ಣ ಅವರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಆತ ಬಹಳ ದೊಡ್ಡ ವ್ಯಕ್ತಿ. ಏನೇನು ಮಾಡುತ್ತಾರೋ ಮಾಡಲಿ. ನಾನು ನನ್ನ ಹೆಂಡತಿ ಒಡವೆ ಅಡವಿಟ್ಟು ಪಡುವಲಹಿಪ್ಪೆ ಗ್ರಾಮದಲ್ಲಿ ಜಮೀನು ಖರೀದಿ ಮಾಡಿದ್ದಾಗ ನನ್ನ ಮೇಲೇಯೂ ಕೇಸ್ ಹಾಕಿ ಸುಪ್ರೀಂ ಕೋರ್ಟ್ ವರೆಗೂ ತೆಗೆದುಕೊಂಡು ಹೋದರು. ಇಂತಹ ಹಲವು ನೋವುಗಳನ್ನು ಅನುಭವಿಸಿ ಬಂದಿದ್ದೇನೆ. ಅದು ಈಗಲೂ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಯಕತ್ವ ಗುಣ ಮೋದಿಗೆ ಮಾತ್ರ
ನಾನು ನರೇಂದ್ರ ಮೋದಿ ಅವರ ಜೊತೆ ಸೇರಿದ್ದರ ಹಿಂದೆ ನನ್ನ ಸ್ವಾರ್ಥವಿಲ್ಲ. ಈ ದೇಶದ ನೂರು ಕೋಟಿ ಜನರಿಗೆ ನಾಯಕತ್ವ ಕೊಡೊ ವ್ಯಕ್ತಿತ್ವ ಇರೋದು ಮೋದಿಗೆ ಮಾತ್ರ. ಅವರನ್ನು ಬಿಟ್ಟು ಮಮತಾ, ಸ್ಟಾಲಿನ್ ಅವರಿಂದ ಸಾಧ್ಯವಾಗುತ್ತದೆಯೇ, ಕಾಂಗ್ರೆಸ್ ಬಗ್ಗೆ ನಾನು ಬಹಳ ಮಾತನಾಡಬಲ್ಲೆ. ಆದರೆ ನಮ್ಮ ವಿರುದ್ಧದ ಅಪ ಪ್ರಚಾರದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಓರ್ವ ಯುವಕನನ್ನು ಬರುವ ಚುನಾವಣೆಯಲ್ಲಿ ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದರು.