ಹೊಸದಿಗಂತ ವರದಿ ಬಳ್ಳಾರಿ:
ನಮೋ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮ ಮಂದಿರದ ಹೋರಾಟದ ಕಥನದ ಶ್ರೀ ಹನುಮ ರಥಯಾತ್ರೆ ಗುರುವಾರ ಸಂಜೆ ನಗರಕ್ಕೆ ಆಗಮಿಸಿದ್ದು, ಶ್ರೀರಾಮ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿ, ವಾಹನದ ಮುಂದೆ ನಿಂತಿರುವ ಶ್ರೀ ಹನುಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಮಹಿಳೆಯರು, ಮಕ್ಕಳು ಆರತಿ ಬೆಳಗಿ ಹೂವುಗಳನ್ನು ಸಮರ್ಪಿಸಿದರು. ಶ್ರೀರಾಮ ಮಂದಿರದ ಹೋರಾಟದ ಕಥನ ಕುರಿತು ನಮೋ ಬ್ರಿಗೇಡ್ ವತಿಯಂದ ರಥಯಾತ್ರೆ ಮೂಲಕ ರಾಜ್ಯದ ಜನರಿಗೆ ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ತಿಳಿಸಲು ಮುಂದಾಗಿದ್ದು, ಗುರುವಾರ ಬೆಳಿಗ್ಗೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಆಗಮಿಸಿತು. ಅಲ್ಲಿಂದ ಕುರುಗೋಡು, ಕೊಳಗಲ್ಲು, ಸಂಗನಕಲ್ಲು, ಮೋಕಾ ಗ್ರಾಮದ ಮೂಲಕ ನಗರಕ್ಕೆ ಸಂಜೆ ಆಗಮಿಸಿತು.
ನಗರದ ಸತ್ಯನಾರಾಯಣ ಪೇಟೆಯ ಶ್ರೀರಾಘವೇಂದ್ರ ಸ್ವಾಮಿ ವೃತ್ತದ ಬಳಿ ಶ್ರೀರಾಮ ಭಕ್ತರು ಭವ್ಯ ಸ್ವಾಗತ ಕೋರಿದರು. ನಂತರ ಎಲ್ ಇಡಿ ಪರದೆಯ ಮೂಲಕ ಶ್ರೀರಾಮ ಮಂದಿರದ ಹೋರಾಟದ ಕುರಿತು ಕೆಲ ಕಾಲ ಜನರಿಗೆ ಸಾಕ್ಷ್ಯಚಿತ್ರದ ಮೂಲಕ ಪ್ರದರ್ಶಿಸಲಾಯಿತು. ಜನರು ಚಳಿಯನ್ನು ಲೆಕ್ಕಿಸದೇ ಕೆಲ ಕಾಲ ಕುತೂಹಲದಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಅಶೋಕ್ ಕುಮಾರ್, ನಮೋ ಬ್ರಿಗೇಡ್ ಕಾರ್ಯಕರ್ತರಾದ ಶಂಕರ್, ಗುರು ಪ್ರಸಾದ್, ಚಂದ್ರಿಕಾ, ಪುಷ್ಪಾ, ರಾಜು, ಅಶೋಕ್, ಸತೀಶ್, ವೀರಸೇನಾ ಇತರರು ಇದ್ದರು.