ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ವಿರೋಧಿಸಿ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ಅವರು ಮೂರು ದಿನಗಳ ಉಪವಾಸವನ್ನು ಆಚರಣೆ ಮಾಡಿದ್ದು, ಜೊತೆಗೆ ಸನಾತನ ಧರ್ಮದ ವಿರುದ್ಧ ನಿಂದನಾತ್ಮಕ ಪದಗಳನ್ನು ಪೋಸ್ಟ್ ಮಾಡಿದ್ದರು.
ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ವಾಸವಿದ್ದ ಹೌಸಿಂಗ್ ಸೊಸೈಟಿ, ಸುರಣ್ಯಾ ಅಯ್ಯರ್ ಮತ್ತು ಮಣಿಶಂಕರ್ ಅಯ್ಯರ್ ಅವರಿಗೆ ಪತ್ರ ಬರೆದಿದ್ದು, ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಇಲ್ಲಿನ ಸೊಸೈಟಿ ತೊರೆಯಬೇಕು ಎಂದು ಕೇಳಿದೆ.
ಸುರಣ್ಯಾ ಅಯ್ಯರ್ ದೆಹಲಿಯ ಜಂಗ್ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಸುರಣ್ಯಾ ಅಯ್ಯರ್ ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ನಾನು ಈ ಸಂಬಂಧಪಟ್ಟ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ (ಆರ್ಡಬ್ಲ್ಯೂಎ) ಸೇರಿರುವ ಕಾಲೋನಿಯಲ್ಲಿ ವಾಸ ಮಾಡುತ್ತಿಲ್ಲ. ಇನ್ನೊಂದು ವಿಚಾರ ಏನೆಂದರೆ, ನಾನು ಸದ್ಯಕ್ಕೆ ಮಾಧ್ಯಮಗಳಲ್ಲಿ ವಿಚಾರದ ಬಗ್ಗೆ ಮಾತನಾಡದೇ ಇರಲು ನಿರ್ಧಾರ ಮಾಡಿದ್ದೇನೆ. ಏಕೆಂದರೆ ಇದೀಗ ಭಾರತದಲ್ಲಿ ಮಾಧ್ಯಮಗಳು ವಿಷ ಮತ್ತು ಗೊಂದಲವನ್ನು ಹರಡುತ್ತಿವೆ. ನಿಮಗೆಲ್ಲ ನಾನು ಗೊತ್ತು. ನಾನು ಬೆಳೆದಿದ್ದೇನೆ, ಅಧ್ಯಯನ ಮಾಡಿದ್ದೇನೆ, ಕೆಲಸ ಮಾಡಿದ್ದೇನೆ ಮತ್ತು ಭಾರತದಲ್ಲಿನ ಎಲ್ಲಾ ರಾಜಕೀಯ ದೃಷ್ಟಿಕೋನಗಳ ಜನರೊಂದಿಗೆ ನನ್ನ ಇಡೀ ಜೀವನದಲ್ಲಿ ಸುಮಾರು 50 ವರ್ಷಗಳವರೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಸದ್ಯಕ್ಕೆ, ನಾನು ನನ್ನ ಫೇಸ್ಬುಕ್ ಮತ್ತು ಯೂಟ್ಯೂಬ್ ಪುಟಗಳಲ್ಲಿ ಮಾತ್ರ ನನ್ನ ಅಭಿಪ್ರಾಯಗಳನ್ನು ಹಾಕುತ್ತೇನೆ ಇದರಿಂದ ನೀವು ಅದರ ಬಗ್ಗೆ ಶಾಂತಿಯುತವಾಗಿ ಯೋಚಿಸಬಹುದು. ನಾನು ಮೀಡಿಯಾ ಸರ್ಕಸ್ ಅನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ಭಾರತದಲ್ಲಿ ನಮಗೆ ಉತ್ತಮ ರೀತಿಯ ಸಾರ್ವಜನಿಕ ವಿಚಾರಗಳು ಬೇಕು ಎಂದು ನಾನು ನಂಬುತ್ತೇನೆ. ದುರುಪಯೋಗಪಡಿಸಿಕೊಳ್ಳುವ ಬದಲು ಯೋಚಿಸಲು ಪ್ರಯತ್ನಿಸೋಣ. ಜೈ ಹಿಂದ್!’ ಎಂದು ಬರೆದಿದ್ದಾರೆ.
ದೆಹಲಿಯ ಜಂಗ್ಪುರ ಪ್ರದೇಶದಲ್ಲಿ ವಾಸಿಸುತ್ತಿರುವ ಸುರಣ್ಯಾ ಅಯ್ಯರ್, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಬೆನ್ನಲ್ಲಿಯೇ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಅವರು, ತಾಯಿಯ ಕೈಯಿಂದ ಒಂದು ಚಮಚ ಜೇನುತುಪ್ಪವನ್ನು ಕುಡಿದು ಉಪವಾಸ ವೃತವನ್ನು ಮುರಿದಿದ್ದೇನೆ ಎಂದು ಹೇಳಿದ್ದರು. ಸುರಣ್ಯಾ ಅವರ ಈ ಮಾತುಗಳು ಅವರ ಸೊಸೈಟಿಯ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಮುಖಂಡರ ಪುತ್ರಿ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿವೆ.