ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯರ ಬಿಡುಗಡೆ ಮಾಡಿದ್ದಕ್ಕಾಗಿ ಕತಾರ್ ಅಧ್ಯಕ್ಷ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಧನ್ಯವಾದ ಅರ್ಪಿಸಿದ್ದಾರೆ.
ಕತಾರ್ ರಾಜಧಾನಿ ನಗರದ ಭವ್ಯವಾದ ಅಮಿರಿ ಅರಮನೆಯಲ್ಲಿ ನಡೆದ ಮಾತುಕತೆಯ ನಂತರ, ಎಮಿರ್ ಅವರೊಂದಿಗಿನ ತಮ್ಮ ಭೇಟಿ ಅದ್ಭುತಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ ಮತ್ತು ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಬಲವಾಗಿಬೆಳೆಯುತ್ತಿವೆ. ಎರಡೂ ರಾಷ್ಟ್ರಗಳು ಭವಿಷ್ಯದ ಕ್ಷೇತ್ರಗಳಲ್ಲಿ ಸಹಯೋಗವನ್ನು ಎದುರು ನೋಡುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹೂಡಿಕೆ, ಶಕ್ತಿ ಮತ್ತು ಹೊಸ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವುದು, ತೃತೀಯ ರಾಷ್ಟ್ರಗಳಲ್ಲಿನ ಪಾಲುದಾರಿಕೆಯನ್ನು ಪರಿಶೀಲಿಸುವುದು ಮತ್ತು ಒಟ್ಟಾರೆ ಸಂಬಂಧಗಳನ್ನು ವಹಿವಾಟಿನ ದೃಷ್ಟಿಕೋನದಿಂದ ನೋಡದೆ ಕಾರ್ಯತಂತ್ರದ ದೃಷ್ಟಿಕೋನದಿಂದ ನೋಡುವ ಕುರಿತು ಮಾತುಕತೆಗಳು ಕೇಂದ್ರೀಕೃತವಾಗಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ಕತಾರ್ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿ ಅವರು ಧನ್ಯವಾದ ಅರ್ಪಿಸಿದರು ಎಂದು ಅವರು ಹೇಳಿದರು.