ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು, ಹಾಸನದಲ್ಲಿರುವ ಅವರ ಮನೆಯ ಕಾಂಪೌಂಡ್ ಅನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿದೆ.
ಹಾಸನದ ವಿದ್ಯಾನಗರದಲ್ಲಿರುವ ಪುಷ್ಪಾ ಅವರಿಗೆ ಸೇರಿದ ನಿವೇಶನದ ಪಕ್ಕದಲ್ಲಿ ಲಕ್ಷ್ಮಮ್ಮ ಎಂಬುವವರ ಜಾಗವಿತ್ತು. ಪುಷ್ಪಾ ಅವರು ತಮ್ಮ ಮನೆಯ ಕಾಂಪೌಂಡ್ ನಿರ್ಮಿಸುವಾಗ ಸುಮಾರು 1,500 ಚದರ ಅಡಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಲಕ್ಷ್ಮಮ್ಮ ಪರವಾಗಿ ದೇವರಾಜು ಎಂಬುವವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ದೀರ್ಘಕಾಲದ ವಿಚಾರಣೆಯ ನಂತರ, ಜಾಗ ಒತ್ತುವರಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಕ್ರಮ ಭಾಗವನ್ನು ತೆರವುಗೊಳಿಸಲು ಸೂಚಿಸಿತ್ತು. ಈ ಆದೇಶದ ಅನ್ವಯ, ಜಿಪಿಎ ಹೋಲ್ಡರ್ ಸಮ್ಮುಖದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆಯನ್ನು ಕೆಡವಲಾಗಿದೆ. ಈ ಕಾರ್ಯಾಚರಣೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

