ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅಶೋಕ್ ಚವಾಣ್ ಸೇರಿದಂತೆ 41 ಜನರು ವಿವಿಧ ರಾಜ್ಯಗಳಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾಗಿದ್ದು, ಚುನಾವಣೆ ಘೋಷಣೆಯಾಗಿದ್ದ 56 ಸ್ಥಾನಗಳ ಪೈಕಿ 41 ರಲ್ಲಿ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ರಾಜಸ್ಥಾನದಿಂದ ರಾಜ್ಯಸಭೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಗುಜರಾತ್ನಿಂದ, ಕೇಂದ್ರ ಸಚಿವ ಅಶ್ವಿನಿ ವೈಷ್ಟವ್ ಒಡಿಶಾದಿಂದ, ಎಲ್ ಮುರುಗನ್ ಮಧ್ಯಪ್ರದೇಶದಿಂದ, ಅಶೋಕ್ ಚವಾಣ್ ಮಹಾರಾಷ್ಟ್ರದಿಂದ, ಅಜಿತ್ ಪವಾರ್ ಬಣದ ಎನ್ಸಿಪಿ ಸೇರಿರುವ ಮಿಲಿಂದ್ ದೇವ್ರಾ, ಪ್ರಪುಲ್ ಪಟೇಲ್ ಕೂಡ ಇದೇ ರಾಜ್ಯದಿಂದ ಆಯ್ಕೆಯಾಗಿದ್ದಾರೆ.
ಯಾವ ಪಕ್ಷಕ್ಕೆ ಎಷ್ಟು?: ಅವಿರೋಧ ಆಯ್ಕೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. 20 ಸ್ಥಾನಗಳಲ್ಲಿ ಕಮಲ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ 6, ಟಿಎಂಸಿ 4, ವೈಎಸ್ಆರ್ಸಿಪಿ 3, ಬಿಜೆಡಿ, ಆರ್ಜೆಡಿ ತಲಾ 2, ಎನ್ಸಿಪಿ, ಶಿವಸೇನೆ ಬಿಆರ್ಎಸ್, ಜೆಡಿಯು ತಲಾ 1 ಸ್ಥಾನದಲ್ಲಿ ಜಯ ಕಂಡಿವೆ.
ಉಳಿದ 15 ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಅದರಲ್ಲಿ 15 ಸ್ಥಾನಗಳು ಉತ್ತರ ಪ್ರದೇಶದಿಂದ 10, ಕರ್ನಾಟಕದ 4 ಮತ್ತು ಹಿಮಾಚಲದ ಒಂದು ಸ್ಥಾನ ಒಳಗೊಂಡಿವೆ.