ಹೊಸದಿಗಂತ, ವಿಧಾನಪರಿಷತ್ತು:
ಸದನದಲ್ಲಿ ಇಂದು ಮತ್ತೆ ‘ಪಾಕ್ ಪರ ಘೋಷಣೆ’ ಭರ್ಜರಿ ಸದ್ದು ಮಾಡುತ್ತಿದೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯದ ಏಳು ಕೋಟಿ ಜನರ ಶಕ್ತಿ ಕೇಂದ್ರದಲ್ಲಿ ದೇಶದ್ರೋಹಿ ಹೇಳಿಕೆ ಕೇಳಿಬಂದು 36 ಗಂಟೆ ಕಳೆದಿದೆ. ಸರ್ಕಾರ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಈ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಏನು ಇಲ್ಲವೇ? ಎಂದು ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತರಾಟೆಗೆತ್ತಿಕೊಂಡರು.
ಇದಕ್ಕೂ ಮುನ್ನ ಸದನದ ಕಲಾಪ ಆರಂಭದಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸೂಚಿಸಲಾಯಿತಾದರೂ, ವಿರೋಧ ಪಕ್ಷದ ನಾಯಕರು ಮಾತ್ರ ಸರ್ಕಾರದ ಉತ್ತರಕ್ಕಾಗಿ ಪಟ್ಟು ಹಿಡಿದು ಬಾವಿಗಿಳಿದು ಪ್ರತಿಭಟನೆ ಮಾಡಿದರು.
ವಿರೋಧ ಪಕ್ಷದ ಸಚೇತಕ ರವಿ ಮಾತನಾಡಿ, ಈ ಘಟನೆ ನಡೆದು 36 ಗಂಟೆಗಳು ಕಳೆದಿದೆ. ಇನ್ನೂ ಆರೋಪಗಳನ್ನು ಬಂಧಿಸಿಲ್ಲ, ಸರ್ಕಾರ ತನ್ಮ ಗಾಂಭೀರ್ಯ ಕಳೆದುಕೊಂಡಿದೆ. ಕೂಡಲೇ ಅವರನ್ನು ಬಂಧಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಪರವಾಗಿ ಸಭಾನಾಯಕ ಬೋಸರಾಜು ಉತ್ತರಿಸಿ, ಈಗಾಗಲೇ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡು ಅನುಮಾನ ಇವರುವವರನ್ನು ಕರೆದು ಹೇಳಿಕೆ ಪಡೆದುಕೊಂಡಿದ್ದಾರೆ, ವಿಡಿಯೋದ ಎಫ್ಎಸ್ಎಲ್ ವರದಿ ಬಂದ ನಂತರ ಸರ್ಕಾರ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂದು ಹೇಳಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು, ಬಾವಿಗಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸಭಾಧ್ಯಕ್ಷರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ಹೊರಹಾಕಿ ಎಂದ ಮರಿತಿಬ್ಬೇಗೌಡ!
ಕಾರ್ಯಕಲಾಪಗಳಿಗೆ ಅಡ್ಡಿಪಡಿಸುವ ಸದಸ್ಯರನ್ನು ಹೊರಹಾಕಿ ಸದನ ನಡೆಸಿ ಎಂದು ಜೆಡಿಎಸ್ ಮರಿತಿಬ್ಬೇಗೌಡ ಸಭಾಪತಿಗಳಿಗೆ ಮನವಿ ಮಾಡಿದರು.