ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ಮೂಲದ ಮೂವರು ಹಾಗೂ ತೆಲಂಗಾಣದ ಓರ್ವ ಯುವಕರನ್ನು ರಷ್ಯಾ ಸೈನ್ಯಕ್ಕೆ ನಿಯೋಜನೆ ಮಾಡಿ ಯುದ್ದಪೀಡಿತ ಉಕ್ರೇನ್ ಗಡಿಗೆ ಕಳಿಸಿರುವ ಹಿನ್ನೆಲೆಯಲ್ಲಿ ಅವರ ಬಿಡುಗಡೆ ಆಗ್ರಹಿಸಿ ರಾಜ್ಯಸಭೆ ವಿರೋಧಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಡಾ ಮಲ್ಲಿಕಾರ್ಜುನ ಖರ್ಗೆ ಅವರು ಬರೆದ ಪತ್ರಕ್ಕೆ ಉತ್ತರಿಸಿರುವ ಸಚಿವ ಜೈಶಂಕರ್ ಯುವಕರ ರಕ್ಷಣೆ ಹಾಗೂ ತಕ್ಷಣ ವಾಪಾಸಾತಿಗೆ ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿಗೆ ಸಂಪರ್ಕಿಸಲಾಗಿದ್ದು ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದು ಉತ್ತರಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಜೈಶಂಕರ್ ಅವರಿಗೆ ಫೆಬ್ರುವರಿ 22 ರಂದು ಪತ್ರ ಬರೆದು ಯುವಕರ ರಕ್ಷಣೆ ಹಾಗೂ ವಾಪಸಾತಿಗೆ ಮನವಿ ಮಾಡಿದ್ದರು. ಖರ್ಗೆ ಅವರ ಪತ್ರಕ್ಕೆ ಫೆಬ್ರುವರಿ 27 ರಂದು ಉತ್ತರಿಸಿರುವ ಅವರು ಈ ವಿಷಯದ ಕುರಿತಂತೆ ವಿದೇಶಾಂಗ ಕಾರ್ಯದರ್ಶಿ ರಷ್ಯಾ ರಾಯಭಾರಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಜೈಶಂಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಪ್ರಾಮಾಣಿಕ ಹಾಗೂ ನಿಷ್ಠಾವಂತ ಪ್ರಯತ್ನದಿಂದಾಗಿ ಭಾರತೀಯ ನಾಗರಿಕರ ವಾಪಸಾತಿಯ ಭರವಸೆ ನೀಡುತ್ತಿದ್ದೇನೆ. ನಿಮ್ಮ ಪತ್ರದಲ್ಲಿ ( ಮನವಿಯಲ್ಲಿ ) ಹೇಳಿರುವಂತೆ ಕಲಬುರಗಿ ಮೂಲದ ಮೂವರ ಹಾಗೂ ತೆಲಂಗಾಣದ ಓರ್ವನ ರಕ್ಷಣೆ ಹಾಗೂ ಅವರನ್ನು ಭಾರತಕ್ಕೆ ಮರಳಿ ಕರೆತರಲು ಪ್ರಯತ್ನಿಸಲಾಗುತ್ತಿದೆ. ಮಾಸ್ಕೋದಲ್ಲಿರುವ ಭಾರತದ ರಾಯಭಾರಿ ರಷ್ಯಾದ ಪ್ರಾಧಿಕಾರದೊಂದಿಗೆ ಚರ್ಚಿಸಿದ್ದಾರೆ. ಈ ವಿಷಯವನ್ನು ಹೆಚ್ಚಿನ ಆದ್ಯತೆ ಎಂದು ಪರಿಗಣಿಸಲಾಗಿದೆ. ವಿದೇಶದಲ್ಲಿರುವ ಭಾರತೀಯರ ಸದಾ ರಕ್ಷಣೆ, ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಭರವಸೆ ನೀಡುತ್ತಿದ್ದೇನೆ ಎಂದು ಜೈಶಂಕರ್ ಅವರು ಖರ್ಗೆ ಅವರಿಗೆ ಬರೆದ ಉತ್ತರದಲ್ಲಿ ಹೇಳಿದ್ದಾರೆ.