ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನವಾಗಿರುವ ಬಿಆರ್ಎಸ್ ನಾಯಕಿ, ತೆಲಂಗಾಲ ಪರಿಷತ್ ಸದಸ್ಯೆ ಕೆ.ಕವಿತಾಗೆ (K Kavitha) ಜಾಮೀನು ನೀಡಲು ದೆಹಲಿ ರೋಸ್ ಅವೆನ್ಯೂ ಕೋರ್ಟ್ ನಿರಾಕರಿಸಿದೆ.
ಏಪ್ರಿಲ್ 4 ರಂದು ಆದೇಶ ಕಾಯ್ದಿರಿಸಿದ ನ್ಯಾ.ಕಾವೇರಿ ಬವೇಜಾ ಅವರಿಂದು ತೀರ್ಪು ಪ್ರಕಟಿಸಿದ್ದಾರೆ.
ಕಳೆದ ಮಾರ್ಚ್ 15 ರಂದು ಹೈದರಾಬಾದ್ನಲ್ಲಿ ಶೋಧ ನಡೆಸಿದ ಬಳಿಕ ಜಾರಿ ನಿರ್ದೇಶನಾಲಯ (ED) ಕೆ.ಕವಿತಾ ಅವರನ್ನ ಬಂಧಿಸಿತ್ತು. ವಿಚಾರಣೆ ಬಳಿಕ ಅವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದ್ಯ ಕವಿತಾ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ವಿಜಯ್ ನಾಯರ್ ಶರತ್ ರೆಡ್ಡಿ, ಕೆ ಕವಿತಾ ಮತ್ತು ಮಾಗುಂಟ ಶ್ರೀನಿವಾಸುಲು ಅವರ ನಿಯಂತ್ರಣದಲ್ಲಿರುವ ʻದಿ ಸೌತ್ ಗ್ರೂಪ್ʼನಿಂದ ಎಎಪಿ ನಾಯಕರ ಪರವಾಗಿ ಕನಿಷ್ಠ 100 ಕೋಟಿ ರೂ.ಗಳಷ್ಟು ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕವಿತಾ ಅವರು 100 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಾವತಿಸಿದ ಮದ್ಯದ ಕಾರ್ಟೆಲ್ ‘ದಿ ಸೌತ್ ಗ್ರೂಪ್’ ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ.