ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಖುದ್ದು ವಕೀಲೆಯೊಬ್ಬರು ಸೈಬರ್ ಕ್ರೈಮ್ಗೆ ತುತ್ತಾಗಿ ಬರೋಬ್ಬರಿ 15 ಲಕ್ಷ ಕಳೆದುಕೊಂಡಿದ್ದಾರೆ.
ಇದರ ಜೊತೆಗೆ ಕ್ಯಾಮೆರಾ ಎದುರು ಬೆತ್ತಲಾಗುವಂತೆ ಮಾಡಿ ಮಾನಕ್ಕೂ ಧಕ್ಕೆ ತಂದಿದ್ದಾರೆ. ಸ್ಕ್ಯಾಮರ್ಗಳ ಜಾಲದಲ್ಲಿ ಸುತ್ತಿಕೊಂಡಿದ್ದ ವಕೀಲೆ ಕಡೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
29 ವರ್ಷದ ವಕೀಲೆ, ಮುಂಬಯಿ ಸೈಬರ್ ಕ್ರೈಂ ತಂಡ ಅಥವಾ ಸಿಬಿಐ ಎಂದು ಹೇಳಿಕೊಂಡ ದುಷ್ಕರ್ಮಿಗಳ ತಂಡವು ಎರಡು ದಿನವಿಡೀ ಆಕೆಯನ್ನು ವಿಡಿಯೋ ಕ್ಯಾಮೆರಾ ಅಥವಾ ಮೈಕ್ರೋಫೋನ್ ಎದುರು ಇರುವಂತೆ ಮಾಡಿದೆ. ಮುಂಬಯಿ ಕ್ರೈಂ ಬ್ರ್ಯಾಂಚ್ ಹಾಗೂ ಸಿಬಿಐ ಎಂದು ಹೇಳಿಕೊಂಡು ಕರೆ ಮಾಡುವ ವಂಚಕರ ತಂಡಗಳು ಸಕ್ರಿಯವಾಗಿವೆ. ವಕೀಲೆ ಇಂಥದ್ದೇ ಜಾಲಕ್ಕೆ ಬಿದ್ದಿದ್ದಾರೆ. ನಿಮ್ಮ ಹೆಸರಿಗೆ ಬಂದಿದ್ದ ಪಾರ್ಸೆಲ್ ವಾಪಸ್ ಬಂದಿದೆ ಎಂದು ಅವರು ಹೇಳಿದ್ದರು. ಮುಂಬಯಿಯಿಂದ ಥಾಯ್ಲೆಂಡ್ಗೆ ಪಾರ್ಸೆಲ್ ಕಳುಹಿಸಲಾಗಿದ್ದು, ಅದರಲ್ಲಿ ಐದು ಪಾಸ್ಪೋರ್ಟ್, ಮೂರು ಕ್ರೆಡಿಟ್ ಕಾರ್ಡ್ಗಳು ಹಾಗೂ ನಿಷೇಧಿತ ಮಾದಕವಸ್ತು ಎಂಡಿಎಂಎ 140 ಮಾತ್ರೆಗಳಿವೆ ಎಂದು ತಿಳಿಸಿದ್ದರು.
ಆ ಪಾರ್ಸೆಲ್ಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ವಕೀಲೆ ಪ್ರತಿಕ್ರಿಯೆ ನೀಡಿದ್ದರು. ಆಗ ಪಾರ್ಸೆಲ್ ಕಂಪೆನಿ ಸೋಗಿನಲ್ಲಿ ಮಾತನಾಡಿದ್ದ ವಂಚಕರು, ತಮ್ಮ ಹೆಸರಿನಲ್ಲಿ ವಂಚನೆ ನಡೆದಿರುವ ಬಗ್ಗೆ ಮುಂಬಯಿಯ ಸೈಬರ್ ಟೀಮ್ಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಇದಕ್ಕೆ ವಕೀಲೆ ಒಪ್ಪಿದಾಗ, ಕರೆಯನ್ನು ‘ಸೈಬರ್ ಅಪರಾಧ ತಂಡ’ಕ್ಕೆ ವರ್ಗಾಯಿಸಿದ್ದರು. ಆ ವ್ಯಕ್ತಿ ಸ್ಕೈಪ್ ಆಪ್ ಡೌನ್ಲೋಡ್ ಮಾಡಿ, ವಿಡಿಯೋ ಕಾಲ್ಗೆ ಬರುವಂತೆ ಸೂಚಿಸಿದ್ದ. ಸ್ಕೈಪ್ ಕರೆಯನ್ನು ಅಭಿಷೇಕ್ ಚೌಹಾಣ್ ಎಂಬ ಹಿರಿಯ ಸಿಬಿಐ ಅಧಿಕಾರಿಗೆ ವರ್ಗಾಯಿಸಿದರು. ನನ್ನ ಕ್ಯಾಮೆರಾ ಆನ್ ಮಾಡಿ ಮಾತನಾಡುವಂತೆ ಅವರು ನಿರ್ದೇಶಿಸಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಹಣ ವರ್ಗಾವಣೆ ಆದ ಬಳಿಕ ಆತ ‘ಮಾದಕವಸ್ತು ಪರೀಕ್ಷೆ’ ನಡೆಸಬೇಕು. ಇದಕ್ಕಾಗಿ ಬಟ್ಟೆ ಕಳಚಿ ಎಂದು ಆದೇಶಿಸಿದ್ದ. ಕ್ಯಾಮೆರಾ ಎದುರು ಆಕೆ ಉಡುಪುಗಳನ್ನು ಕಳಚಿದ್ದರು. “ಹಾಗೆ ಮಾಡದೆ ಇದ್ದರೆ, ನನ್ನನ್ನು ಮತ್ತು ನನ್ನ ಕುಟುಂಬವನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗುವುದು. ನನ್ನನ್ನು ಹಾಗೂ ನನ್ನ ಕುಟುಂಬವನ್ನು ಸಾಯಿಸಲಾಗುವುದು ಎಂದು ಬೆದರಿಕೆ ಹಾಕಿ ನಿಂದಿಸಿದ್ದ” ಎಂದು ಆಕೆ ತಿಳಿಸಿದ್ದಾರೆ.
ಇದರ ಬಳಿಕ ಆಕೆಯ ಬೆತ್ತಲೆ ವಿಡಿಯೋಗಳನ್ನು ಇರಿಸಿಕೊಂಡು ಬ್ಲ್ಯಾಕ್ಮೇಲ್ ಮಾಡತೊಡಗಿದ್ದ. ಅದೇ ದಿನ ಮಧ್ಯಾಹ್ನ 3 ಗಂಟೆ ಒಳಗೆ 10 ಲಕ್ಷ ರೂ ನೀಡದೆ ಹೋದರೆ ಡಾರ್ಕ್ ವೆಬ್ ಹಾಗೂ ಹಲವಾರು ಜನರಿಗೆ ವಿಡಿಯೋಗಳನ್ನು ಮಾರಾಟ ಮಾಡುವುದಾಗಿ ಬೆದರಿಸಿದ್ದ. ಇದರ ಬಳಿಕ ಆಕೆ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.