ದಿಗಂತ ವರದಿ ಹಾಸನ :
ಹಾಸನ ಜಿಲ್ಲೆಯಲ್ಲಿ ಉಪಟಳ ನೀಡುತ್ತಿರುವ ಐದು ಪುಂಡಾನೆಗಳನ್ನು ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲು ಸರ್ಕಾರ ಅನುಮತಿ ನೀಡಿದೆ.
ಪುಂಡಾನೆಗಳ ಸೆರೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವನ್ಯಜೀವಿ ಪರಿಪಾಲಕ ಸುಭಾಷ್ ಮಾಲ್ಕಡೆ ಅನುಮತಿ ನೀಡಿದ್ದು, ಇಂದಿನಿಂದ ಏ.18 ರಿಂದ ಏ.24 ರವರೆಗೆ ಕಾರ್ಯಾಚರಣೆ ನಡೆಯಲಿದೆ.
ಕಾಡಾನೆಗಳ ಕಾರ್ಯಾಚರಣೆಗೆ ಏಳು ಸಾಕಾನೆಗಳು ಭಾಗಿಯಾಗಲಿವೆ. ಈಗಾಗಲೇ ತಾತ್ಕಾಲಿಕ ಶಿಬಿರಕ್ಕೆ ಬೇಲೂರು ತಾಲ್ಲೂಕಿನ, ಬಿಕ್ಕೋಡು ಬಳಿಯಿರುವ ತಾತ್ಕಾಲಿಕ ಕ್ಯಾಂಪ್ಗೆ ಅಭಿಮನ್ಯು, ಧನಂಜಯ, ಹರ್ಷ, ಪ್ರಶಾಂತ, ಸುಗ್ರೀವ, ಕರ್ನಾಟಕ ಭೀಮಾ, ಮಹೇಂದ್ರ ಸಾಕಾನೆಗಳು ಆಗಮಿಸಿವೆ.
ಈ ಭಾರಿ ನರಹಂತಕ ಹಾಗೂ ಹೆಚ್ಚು ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ಟಾರ್ಗೆಟ್ ಮಾಡಿದ್ದು ನರಹಂತಕ ಕರಡಿ, ಸೀಗೆ, ವಿಕ್ರಾಂತ್, ಪೆನ್ಸಿಲ್ ಕೋರೆ, ಕ್ಯಾಪ್ಟನ್, ಕಾನಳ್ಳಿ ಕುಳ್ಳ ಹೆಸರಿನ ಕಾಡಾನೆಗಳು ಹಾಗೂ ಅರ್ಜುನನ ಕೊಂದ ಕಾಡಾನೆಯನ್ನು ಸೆರೆ ಹಿಡಿಯಲು ಸಿದ್ದತೆ ನಡೆಸಲಾಗಿದೆ.