ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಥಣಿಸಂದ್ರ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನಕ್ಕೂ ಮುಂದುವರಿದಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯ ನಡುವೆ ಬಿಡಿಎ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಯಾವುದೇ ನ್ನೋಟಿಸ್ ಇಲ್ಲದೇ ಏಕಾಏಕಿ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂಬ ಆರೋಪದೊಂದಿಗೆ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗೆ ಮುಂಗಡ ಹಣವೂ ವಾಪಸ್ ಸಿಕ್ಕಿಲ್ಲ. ಮುಂಗಡ ಮೊತ್ತ ನೀಡಿದ್ದರೆ ಬೇರೆ ಮನೆ ಹುಡುಕಿಕೊಳ್ಳಬಹುದಿತ್ತು ಎಂದು ಜನ ಕಣ್ಣೀರಿಟ್ಟಿದ್ದಾರೆ. ಸುಮಾರು ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಈ ಪ್ರದೇಶದಲ್ಲಿ ವಾಸವಾಗಿದ್ದೇವೆ. ಇಷ್ಟೊಂದು ವರ್ಷಗಳ ನಂತರ ಯಾವುದೇ ಮಾಹಿತಿ ನೀಡದೇ ತೆರವು ಕಾರ್ಯ ಕೈಗೊಂಡಿರುವುದು ಅನ್ಯಾಯ ಎಂದು ನಿವಾಸಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: Rice series 1 |ರುಚಿರುಚಿಯಾದ ಕ್ಯಾಪ್ಸಿಕಂ ಬಾತ್ ಒಮ್ಮೆ ಟ್ರೈ ಮಾಡಿ! ರೆಸಿಪಿ ತುಂಬಾ ಸಿಂಪಲ್
ಥಣಿಸಂದ್ರದ ಕೆ.ಆರ್.ಪುರ ಹೋಬಳಿಗೆ ಸೇರಿದ ಸರ್ವೆ ನಂಬರ್ 28/1 ಮತ್ತು 28/2 ರಲ್ಲಿನ ಸುಮಾರು ಎರಡು ಎಕರೆ ಜಾಗವನ್ನು ಒತ್ತುವರಿಯಾಗಿದೆ ಎಂದು ಕೇಶವ ನಾರಾಯಣ ಕಮಿಟಿ ವರದಿ ಆಧಾರದಲ್ಲಿ ಹೈಕೋರ್ಟ್ ತೆರವುಗೆ ಆದೇಶ ನೀಡಿತ್ತು.
ಈ ಜಾಗದಲ್ಲಿ ವಾಸವಾಗಿದ್ದ ಅನೇಕ ಕುಟುಂಬಗಳ ಬಳಿ ಎ ಖಾತಾ, ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿದಂತೆ ದಾಖಲೆಗಳಿವೆ. ಸರ್ಕಾರಿ ಜಾಗ ಎನ್ನುವುದು ನಮಗೆ ಮೊದಲೇ ತಿಳಿದಿರಲಿಲ್ಲ ಎಂದು ನಿವಾಸಿಗಳು ತಮ್ಮ ಅಳಲನ್ನು ಹೊರಹಾಕಿದ್ದಾರೆ. ತೆರವು ಕಾರ್ಯ ಮುಂದುವರಿದಂತೆ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ.

