ಹೊಸದಿಗಂತ ಡಿಜಿಟಲ್ ಡೆಸ್ಕ್
ಹೈದರಾಬಾದ್ ವಿಶ್ವವಿದ್ಯಾನಿಲಯದ ಪಿಎಚ್ಡಿ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿನ ಪ್ರಕರಣದ ತನಿಖೆಯನ್ನು ತೆಲಂಗಾಣ ಪೊಲೀಸರು ಮುಕ್ತಾಯಗೊಳಿಸಿದ್ದು, ಎಲ್ಲಾ ಆರೋಪಿಗಳಿಗೂ ಕ್ಲೀನ್ ಚಿಟ್ ನೀಡಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಂದಿನ ಸಿಕಂದರಾಬಾದ್ ಸಂಸದ ಬಂಡಾರು ದತ್ತಾತ್ರೇಯ, ವಿಧಾನ ಪರಿಷತ್ ಸದಸ್ಯ ಎನ್ ರಾಮಚಂದರ್ ರಾವ್ ಮತ್ತು ಉಪಕುಲಪತಿ ಅಪ್ಪಾ ರಾವ್ ಅವರನ್ನು ದೋಷಮುಕ್ತಗೊಳಿಸಿದ್ದಾರೆ.
2016ರ ಜನವರಿಯಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಬಳಿಕ ವಿಶ್ವವಿದ್ಯಾನಿಲಯಗಳಲ್ಲಿ ದಲಿತರ ಮೇಲಿನ ತಾರತಮ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು.
ವರದಿಯಲ್ಲಿ ಏನಿದೆ ?
ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ವಿವಿ ಕ್ಯಾಂಪಸ್ನಲ್ಲಿ ಆತನ ರಾಜಕೀಯ ಚಟುವಟಿಕೆಗಳು, ಅಧ್ಯಯನದಲ್ಲಿ ಹಿನ್ನಡೆ ಸೇರಿ ಹಲವು ಕಾರಣಗಳಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಆತ ಓದಿನಲ್ಲಿ ಹಿಂದಿರುತ್ತಾನೆ. ಇಲ್ಲವೇ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು ಕಾರಣವಾಗಿರುತ್ತವೆ. ಇನ್ನು ರೋಹಿತ್ ವೇಮುಲ ಪಿಎಚ್.ಡಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ, ಎರಡು ವರ್ಷದ ಬಳಿಕ ಮತ್ತೊಂದು ಪಿಎಚ್.ಡಿ ಮಾಡಲು ಮುಂದಾಗಿದ್ದ. ಏಕೆಂದರೆ, ಆತ ಶಿಕ್ಷಣಕ್ಕಿಂತ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರೋಹಿತ್ ವೇಮುಲ ದಲಿತನಲ್ಲ ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೋಹಿತ್ ವೇಮುಲ ಪ್ರಮಾಣಪತ್ರಗಳು ನಕಲಿ ಆಗಿವೆ. ಆತನಿಗೆ ತಾಯಿಯು ನಕಲಿ ಪರಿಶಿಷ್ಟ ಜಾತಿ (SC) ಪ್ರಮಾಣಪತ್ರ ತಯಾರಿಸಿ ಕೊಟ್ಟಿದ್ದಾರೆ ಎಂಬುದು ಗೊತಿತ್ತು. ಇದಾದ ಬಳಿಕ ಆತನು ತನ್ನ ಘನತೆಗೆ ಧಕ್ಕೆ ಬರುತ್ತದೆ ಎಂಬುದರ ಚಿಂತೆಯಲ್ಲಿದ್ದ. ನಕಲಿ ಪ್ರಮಾಣಪತ್ರದ ಭೀತಿಯಲ್ಲಿದ್ದ ಆತನು, ಇದುವರೆಗೆ ತಾನು ಗಳಿಸಿದ ಪದವಿಗಳೆಲ್ಲ ಹಾಳಾಗುತ್ತವೆ ಎಂಬ ಚಿಂತೆ ಕಾಡುತ್ತಿತ್ತು. ಇದರಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದಾಗಿ ವರದಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ?
ಹೈದರಾಬಾದ್ನಲ್ಲಿರುವ ಸೆಂಟ್ರಲ್ ಯುನಿವರ್ಸಿಟಿಯ ಹಾಸ್ಟೆಲ್ ಕೋಣೆಯಲ್ಲಿ ರೋಹಿತ್ ವೇಮುಲ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಈತನು ದಲಿತನೆಂದು, ವಿಶ್ವವಿದ್ಯಾಲಯದಲ್ಲಿ ದಲಿತ ವಿರೋಧಿ ನೀತಿಗಳು ಇವೆ ಎಂದು, ಕೇಂದ್ರದ ಮೋದಿ ಸರ್ಕಾರವು ದಲಿತ ವಿರೋಧಿ ಎಂದೂ ಪ್ರತಿಭಟನೆ ನಡೆಸಲಾಗಿತ್ತು. ದೆಹಲಿ ಸೇರಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ರೋಹಿತ್ ವೇಮುಲ ಆತ್ಮಹತ್ಯೆಗೂ ಮುನ್ನ ಆತನ ಮೇಲೆ ಎಬಿವಿಪಿ ಸದಸ್ಯರು ದಾಳಿ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ದೇಶದಲ್ಲಿ ಅಸಹಿಷ್ಣುತೆ ಇದೆ, ಬಿಜೆಪಿ ಸರ್ಕಾರದ ಬಂದ ಬಳಿಕ ಹೀಗೆಲ್ಲ ಆಗುತ್ತಿದೆ, ದಲಿತ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದೆಲ್ಲ ಹೇಳಲಾಗುತ್ತಿತ್ತು.