ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆಯ ವಿಶೇಷ ನ್ಯಾಯಾಲಯವು 11 ವರ್ಷಗಳ ನಂತರ ತೀರ್ಪು ಪ್ರಕಟಿಸಿದೆ.
ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಮೂವರು ನಿರಪರಾಧಿಗಳು ಮತ್ತು ಇಬ್ಬರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದ್ದು, ಇಬ್ಬರಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ.
ಆರೋಪಿ ವೀರೇಂದ್ರ ಸಿಂಗ್ ತಾವ್ಡೆ ವಿರುದ್ಧ ಪಿತೂರಿ ಆರೋಪ ಹೊರಿಸಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವೀರೇಂದ್ರ, ಪುನಾಲೇಕರ್ ಮತ್ತು ಭಾವೆರನ್ನು ಖುಲಾಸೆಗೊಳಿಸಲಾಗಿದೆ. ಕಲಾಸ್ಕರ್ ಮತ್ತು ಅಂದುರೆ ವಿರುದ್ಧ ದಾಭೋಲ್ಕರ್ ಹತ್ಯೆಯ ಆರೋಪ ಸಾಬೀತಾಗಿದೆ. ಆದ್ದರಿಂದ ಇಬ್ಬರಿಗೂ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.
ಏನಿದು ಪ್ರಕರಣ?
2013ರ ಆಗಸ್ಟ್ 20ರಂದು ಪುಣೆಯ ಓಂಕಾರೇಶ್ವರ ಸೇತುವೆ ಮೇಲೆ ವಾಕಿಂಗ್ ಹೋಗುತ್ತಿದ್ದಾಗ ದಾಭೋಲ್ಕರ್ (67) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಐವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಪಿತೂರಿ), 302 (ಕೊಲೆ), ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳು ಮತ್ತು ಯುಎಪಿಎ ಸೆಕ್ಷನ್ 16 (ಭಯೋತ್ಪಾದಕ ಕೃತ್ಯಗಳಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.