ಹೊಸದಿಗಂತ ವರದಿ, ಹುಬ್ಬಳ್ಳಿ:
ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದಂತೆ ಯುವತಿ ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿಗೆ ನೀಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಡಿ ನೀಡುವ ಉದ್ದೇಶ ಇಂತಹ ಪ್ರಕರಣ ನಡೆದಾಗ ಯಾವುದೇ ಇಪ್ಲ್ಯುಎನ್ಸ್ ಆಗಬಾರದು ಎಂಬ ಕಾರಣಕ್ಕೆ. ಸ್ಥಳೀಯ ಪೊಲೀಸರು ಸಮರ್ಥರಿದ್ದಾರೆ ಎಂದರು.
ಈ ವಿಚಾರದಲ್ಲಿ ಕೆಲ ನಾಯಕರು ರಾಜಕೀಯ ಬಣ್ಣ ಕಟ್ಟುವ ಪ್ರಯತ್ನ ಮಾಡಿದ್ದರು. ಆದರೆ ಸಿಐಡಿ ತನಿಖೆಯಿಂದ ಎಲ್ಲ ಸತ್ಯಾಸತ್ಯತೆ ಗಳು ಹೊರಬರಲಿದೆ. ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ. ಯಾವುದೇ ಕಾರಣಕ್ಕೂ ನಿರಾಸಕ್ತಿ ಆಗಲ್ಲು ಬಿಡಲ್ಲ ಎಂದರು.
ಪೊಲೀಸರು ನಿರ್ಲಕ್ಷ್ಯ ಮಾಡಿದ್ದು, ತನಿಖೆಯಿಂದ ಹೊರಬರಲಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಬಿಜೆಪಿ ಅವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ೨೦೨೧ ಜನೆವರಿಯಿಂದ ಏಪ್ರಿಲ್ ವರೆಗೆ ೪೪೯ ಕೊಲೆ ಪ್ರಕರಣ ದಾಖಲಾಗಿದ್ದವು, ಅದೇ ರೀತಿ ೨೦೨೨ ರಲ್ಲಿ ೪೬೬, ೨೦೨೩ ಯಿಂದ ೪೩೧ ಆಗಿದೆ. ಈಗ ನಮ್ಮ ಅಧಿಕಾರದ ಅವಧಿಯಲ್ಲಿ ೪೩೦ ಆಗಿವೆ. ನಾನು ಬಿಜೆಪಿ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಬೇಕು ಎಂದರು.