ಹೊಸದಿಗಂತ ಮೈಸೂರು:
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದೇ ಸರ್ಕಾರ ಇರುವ ಕಾರಣ ವಿಧಾನ ಪರಿಷತ್ ಗೆ ಲಾಭಿ ಹೆಚ್ಚಾಗಿದೆ. ಹಾಗಾಗಿ ಪರಿಷತ್ಗೆ ಯಾರನ್ನು ನೇಮಕ ಮಾಡಬೇಕು ಎಂಬುದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಸರ್ಕಾರಕ್ಕೆ ಬೆಂಬಲ ಇರುವ ಕಾರಣ ವಿಧಾನ ಪರಿಷತ್ಗೆ ಲಾಭಿಯು ಕೂಡ ಹೆಚ್ಚಾಗಿದೆ. ಪರಿಷತ್ ವಿಚಾರದಲ್ಲಿ ಯಾವಾಗಲೂ ಲಾಬಿ,ಒತ್ತಡ ಇರುತ್ತದೆ ಎಂದರು. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ. ಜಾ.ದಳ-ಬಿಜೆಪಿ ಮೈತ್ರಿಯಿಂದ ನಮ್ಮ ಗೆಲುವಿಗೆ ಯಾವುದೇ ಧಕ್ಕೆ ಇಲ್ಲ ಎಂದು ನುಡಿದರು.
ಕಳೆದ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರವನ್ನು ತಂದೆಗಾಗಿ ತ್ಯಾಗ ಮಾಡಿದ್ದಾರೆ. ಹೈಕಮಾಂಡ್ ಆಗ ನೀವು ಸ್ಪರ್ಧೆ ಮಾಡಬೇಡಿ, ನಿಮ್ಮ ತಂದೆ ಸ್ಪರ್ಧೆ ಮಾಡಲಿ ಎಂದು ಹೇಳಿದ್ದರು. ಅದಕ್ಕೆ ಅವರು ತಲೆ ಬಾಗಿದ್ದರು. ಹೀಗಾಗಿ ಇವತ್ತಿನ ಸಂದರ್ಭದಲ್ಲೂ ಅವರ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.