ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಅರವಿಂದ ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನಿನ ಅವಧಿಯನ್ನು ಒಂದು ವಾರ ವಿಸ್ತರಿಸುವಂತೆ ಸಚಿವೆ ಅತಿಶಿ ಕೋರಿದ್ದು, ಇದು ಕೇಜ್ರಿವಾಲ್ ನಾಯಕ ಎಂದು ದೆಹಲಿ ಬಿಜೆಪಿ ಘಟಕ ಟೀಕಿಸಿದೆ.
ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರಿಗೆ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನನ್ನು ಮೇ 10ರಂದು ಮಂಜೂರು ಮಾಡಿತ್ತು. ಜೂನ್ 2ರಂದು ಶರಣಾಗಬೇಕು ಎಂದು ತಾಕೀತು ಮಾಡಿತ್ತು.
ಇದೀಗ ದೇಹದ ತೂಕವು ಇದ್ದಕ್ಕಿದ್ದಂತೆ ಕಡಿಮೆ ಆಗಿರುವ ಪರಿಣಾಮ ಕೀಟೊನ್ ಮಟ್ಟವು ಹೆಚ್ಚಾಗಿದೆ. ಇವು ಮೂತ್ರಕೋಶದ ಸಮಸ್ಯೆ, ಹೃದಯದ ಗಂಭೀರ ಸಮಸ್ಯೆ ಅಥವಾ ಕ್ಯಾನ್ಸರ್ನ ಸೂಚಕಗಳಿರಬಹುದು. ಇದರಿಂದಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಿರುವುದರಿಂದ ಸಿಎಂ ಅರವಿಂದ ಕೇಜ್ರಿವಾಲ್ ಅವರು ಜೂನ್ 2ರ ಬದಲು ಜೂನ್ 9ಕ್ಕೆ ಜೈಲಿಗೆ ಮರಳುವುದಾಗಿ ಅರ್ಜಿಯಲ್ಲಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ, ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇಜ್ರಿವಾಲ್ ಅವರು ನಾಟಕವಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಸುಪ್ರೀಂ ಕೋರ್ಟ್ ಕೇಜ್ರಿವಾಲ್ಗೆ ಚುನಾವಣಾ ಪ್ರಚಾರಕ್ಕಾಗಿ ಜಾಮೀನು ನೀಡಿತ್ತು. ಆ ಕೆಲಸವನ್ನು ಅವರು (ಕೇಜ್ರಿವಾಲ್) ಯಾವುದೇ ತೊಂದರೆಯಿಲ್ಲದೆ ಮಾಡಿದ್ದಾರೆ. ಆದರೆ, ಪ್ರಚಾರ ಮುಗಿದ ಕೂಡಲೇ ಇದೀಗ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದಲ್ಲಿ ಸದ್ಯ ಪಂಜಾಬ್ನಲ್ಲಿ ಪ್ರಚಾರದಲ್ಲಿ ನಿರತರಾಗುವ ಬದಲು ವೈದ್ಯಕೀಯ ಪರೀಕ್ಷೆಗಳನ್ನು ಏಕೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.