ನೀವು ಬರುವುದಾದರೆ ಸರ್ಕಾರದಿಂದ ಹೊರಗುಳಿಯುವೆ: ಟಿಡಿಪಿ, ಜೆಡಿಯುಗೆ ಕಾಂಗ್ರೆಸ್ ಆಫರ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎನ್‌ಡಿಎ ಮೈತ್ರಿಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯುವನ್ನು ತನ್ನತ್ತ ಸೆಳೆಯುವ ಇರಾದೆಯಲ್ಲಿರುವ ಇಂಡಿ ಒಕ್ಕೂಟ ಈಗ ಬಿಗ್‌ ಆಫರ್‌ಅನ್ನು ನೀಡಿದೆ. ಹಾಗೇನಾದರೂ ಇಂಡಿ ಒಕ್ಕೂಟಕ್ಕೆ ಸರ್ಕಾರ ರಚನೆ ಸಾಧ್ಯವಾದಲ್ಲಿ ಇಡೀ ಸರ್ಕಾರದಿಂದಲೇ ಹೊರಗುಳಿದು ಕೇವಲ ಬಾಹ್ಯ ಬೆಂಬಲ ಮಾತ್ರವೇ ನೀಡುವ ಆಫರ್‌ಅನ್ನು ಕಾಂಗ್ರೆಸ್‌ ನೀಡಿದೆ.

ಈ ಮೂಲಕ ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವ ನಿಟ್ಟಿನಲ್ಲಿ ರಾಹುಲ್‌ ಗಾಂಧಿಗೆ ಪ್ರಧಾನಿ ಪಟ್ಟ ಸಿಗದೇ ಇದ್ದರೂ ಪರವಾಗಿಲ್ಲ ಎನ್ನುವ ಇರಾದೆಯಲ್ಲಿ ಕಾಂಗ್ರೆಸ್ ಇದೆ.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ, ಮುಂದಿನ ನಿರ್ಧಾರ ನಿರ್ಧರಿಸಲು ಇಂದು ಸಂಜೆ ಇಂಡಿ ಮೈತ್ರಿಕೂಟ ಸಭೆ ನಡೆಸಲಿದೆ. ಮೈತ್ರಿಕೂಟ ವಿರೋಧ ಪಕ್ಷದಲ್ಲಿ ಕೂರಬೇಕೋ ಅಥವಾ ಸರ್ಕಾರ ರಚಿಸಲು ಪ್ರಯತ್ನಿಸಬೇಕೋ ಎಂಬುದನ್ನು ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಇಂಡಿ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯ ಜೊತೆಗೆ ಕಾಂಗ್ರೆಸ್ ಪಕ್ಷದ ಸಭೆಯೂ ನಡೆಯಲಿದೆ. ಇದರಲ್ಲಿ ಮೈತ್ರಿಕೂಟದ ಮುಖಂಡರ ಜತೆಗಿನ ಸಭೆಯಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಇನ್ನೊಂದೆಡೆ ಟಿಡಿಪಿ ಹಾಗೂ ಜೆಡಿಯು ನಾಯಕರನ್ನು ಸಂಪರ್ಕಿಸುವ ಕೆಲಸವನ್ನು ಇಂಡಿಯಾ ನಾಯಕರು ಮಾಡುತ್ತಿದ್ದಾರೆ.

ಫಲಿತಾಂಶದಲ್ಲಿ ಮೈತ್ರಿಕೂಟಕ್ಕೆ ಒಟ್ಟು 204 ಸ್ಥಾನಗಳು ಲಭಿಸಿವೆ. ಸರ್ಕಾರ ರಚಿಸಲು ಮೈತ್ರಿಕೂಟಕ್ಕೆ 272 ಸಂಸದರ ಬೆಂಬಲ ಬೇಕು. ಅಂತಹ ಪರಿಸ್ಥಿತಿಯಲ್ಲಿ, ಬಹುಮತವನ್ನು ಪಡೆಯಲು, ಅದು ಪ್ರಸ್ತುತ ಸೀಟು ಹಂಚಿಕೆಯ ಹೊರಗಿನ ಪಾಲುದಾರರನ್ನು ಹುಡುಕಬೇಕಾಗುತ್ತದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿಯ 29 ಸಂಸದರ ಹೊರತಾಗಿ, ಮೈತ್ರಿಕೂಟಕ್ಕೆ ಟಿಡಿಪಿ ಮತ್ತು ಜೆಡಿಯು ಬೆಂಬಲವೂ ಬೇಕಾಗುತ್ತದೆ. ವರದಿಗಳ ಪ್ರಕಾರ, ಈ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!