ಶ್ರೀ ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು: ಪ್ರೊ. ಭಗವಾನ್ ವಿವಾದಿತ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು ಎಂದು ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹರಿಹರದ ಪ್ರೊ. ಕೃಷ್ಣಪ್ಪ ಭವನದಲ್ಲಿ ನಡೆದ ಡಾ. ಅಂಬೇಡ್ಕರ್, ಕೃಷ್ಣಪ್ಪ‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಶ್ರೀ ರಾಮ ದಶರಥನಿಗೆ ಹುಟ್ಟೇ ಇಲ್ಲ, ಪುರೋಹಿತರಿಗೆ ಹುಟ್ಟಿದವನು. ಇದು ವಾಲ್ಮೀಕಿ ರಾಮಾಯಣದಲ್ಲೇ ಇದೆ, ಓದಿ. ರಾಮ ರಾಜ್ಯಭಾರ ಮಾಡೇ ಇಲ್ಲ, ರಾಮನ ತಮ್ಮ ಭರತ ರಾಜ್ಯಭಾರ ಮಾಡಿದ್ದ. ರಾಮ ಬೆಳಗ್ಗೆ ಪುರೋಹಿತರ ಜೊತೆ ಸೇರಿ ಪೂಜೆ ಮಾಡುತ್ತಿದ್ದನು. ಮಧ್ಯಾಹ್ನವಾದರೆ ಸಾಕು ಹುಡುಗಿಯರ ಜತೆ ಸೇರಿ ಹೆಂಡ ಕುಡಿಯುತ್ತಿದ್ದನು. ರಾಮ ಮಧು ಮೇರೆ ಎಂಬ ಹೆಂಡ ಕುಡಿಯುತ್ತಿದ್ದ ಎಂದು ಹೇಳಿದ್ದಾರೆ.

ಇನ್ನು ಮಹಾಭಾರತ ವಿಷಯಕ್ಕೆ ಬಂದರೆ, ಶಾಪಗ್ರಸ್ಥ ರಾಜ ಪಾಂಡು, ಐವರು ಪಾಂಡವರ ತಂದೆ ಎಂದು ಹೇಳಲಾಗುತ್ತಿದ್ದರೂ ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳಿಂದ ಎಂದು ಮಹಾಭಾರತದಲ್ಲೇ ಇದೆ’ ಎಂದು ತಿಳಿಸಿದ್ದಾರೆ.

ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ. ಶೂದ್ರರೆಲ್ಲಾ ಬ್ರಾಹ್ಮಣರ ಸೇವಕರು ಎಂಬುದನ್ನು ಸಾರಿ ಹೇಳಿದೆ. ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ, ಆದರೆ ಕೆಲವರು ಪುರಾಣ, ಮನುಸ್ಮೃತಿಯನ್ನು ತಲೆ ಮೇಲೆ ಹೊತ್ತು ಅದರ ಪ್ರಕಾರ ಆಡಳಿತ ನಡೆಸುತ್ತೇವೆಂದು ಕುಣಿಯುತ್ತಾರೆ ಎಂದು ಟೀಕಿಸಿದ್ದಾರೆ.

ಈ ಹಿಂದೆ ಭಗವಾನ್‌ ಅವರು, ಅಯೋಧ್ಯೆಯ ಅರಸನಾಗಿದ್ದ ಶ್ರೀರಾಮನು ಮದ್ಯ ಸೇವಿಸುತ್ತಿದ್ದ. ಆತ ಪತ್ನಿಯನ್ನು ಕಾಡಿಗೆ ಅಟ್ಟಿದ್ದ. ಹೀಗಾಗಿ ಆತನ ದೇವರೇ ಅಲ್ಲ ಎಂದು ಹೇಳಿದ್ದರು.ಭಗವಾನ್‌ ವಿವಾದಿತ ಹೇಳಿಕೆಗಳ ವಿರುದ್ಧ ಈ ಹಿಂದೆ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!