ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ವಯನಾಡು ಹಾಗೂ ರಾಯ್ಬರೇಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇದೀಗ ವಯನಾಡು ಸಂಸದನಾಗಿಯೇ ಮುಂದುವರಿಯಬೇಕೋ ಅಥವಾ ರಾಯ್ಬರೇಲಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಬೇಕೋ ಎಂಬ ಗೊಂದಲ ಕಾಡುತ್ತಿದೆ.
ಇದರ ನಡುವೆ ಕೇರಳಕ್ಕೆ ಭೇಟಿ ನೀಡಿರುವ ಅವರು, ನರೇಂದ್ರ ಮೋದಿ ಅವರಂತೆ ನಾನು ದೈವಾಂಶ ಸಂಭೂತನಲ್ಲ. ನನಗೆ ಜನರೇ ದೇವರು, ಅವರೇ ತೀರ್ಮಾನಿಸುತ್ತಾರೆ’ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
ನನ್ನ ಮುಂದೆ ಎರಡು ಆಯ್ಕೆಗಳಿವೆ. ನಾನು ವಯನಾಡು ಸಂಸದನಾಗಿ ಮುಂದುವರಿಯಬೇಕೋ, ರಾಯ್ಬರೇಲಿ ಸಂಸದನಾಗಬೇಕೋ ಎಂಬ ಪ್ರಶ್ನೆ ಇದೆ. ಆದರೆ, ಪ್ರಧಾನಿಯವರಂತೆ ನನಗೆ ದೇವರು ಮಾರ್ಗದರ್ಶನ ನೀಡುವುದಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯನಾಗಿದ್ದು, ದೇಶದ ಬಡವರೇ ನನಗೆ ದೇವರಾಗಿದ್ದಾರೆ. ನಾನು ಯಾವ ಕ್ಷೇತ್ರದ ಸಂಸದನಾಗಿ ಮುಂದುವರಿಯಬೇಕೋ ಎಂಬುದನ್ನು ದೇಶದ ಜನರೇ ತೀರ್ಮಾನಿಸುತ್ತಾರೆ ಎಂಬುದಾಗಿ ಹೇಳಿದರು.
400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದರು. ಇದಾದ ಬಳಿಕ ಮಾಯವಾದ ಅವರು 300ಕ್ಕೂ ಅಧಿಕ ಕ್ಷೇತ್ರ ಅಂದರು. ಇದಾದ ನಂತರ, ನಾನೇನೂ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಎಲ್ಲ ತೀರ್ಮಾನಗಳೂ ದೇವರದ್ದೇ ಎಂದರು. ಆದರೆ, ನರೇಂದ್ರ ಮೋದಿ ಅವರಿಗೆ ಪರಮಾತ್ಮನೇ ಮುಂಬೈ ಏರ್ಪೋರ್ಟ್ ಬಿಟ್ಟುಕೊಡು, ಲಖನೌ ಏರ್ಪೋರ್ಟ್ ಬಿಟ್ಟುಕೊಡು, ಅಂಬಾನಿ ಹಾಗೂ ಅದಾನಿ ಅವರ ಪರವಾಗಿ ಕೆಲಸ ಮಾಡು ಎಂಬುದಾಗಿ ಸೂಚಿಸುತ್ತಿದ್ದಾನೆ ಎಂದು ಕುಟುಕಿದರು.