ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಮೋದಿ ಸರಕಾರವು ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಭತ್ತ, ಸೂರ್ಯಕಾಂತಿ, ಜೋಳ ಸೇರಿ 14 ಹಿಂಗಾರು ಬೆಳೆಗಳಿಗೆ (Kharif Crops) ಕನಿಷ್ಠ ಬೆಂಬಲ ಬೆಲೆ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ (ಜೂನ್ 19) ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತೀರ್ಮಾನಗಳ ಕುರಿತು ಮಾಹಿತಿ ನೀಡಿದರು. ‘ನರೇಂದ್ರ ಮೋದಿ ಅವರ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ಭತ್ತ ಸೇರಿ 14 ಹಿಂಗಾರು ಬೆಳೆಗಳಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಭತ್ತಕ್ಕೆ ನೀಡುವ ಎಂಎಸ್ಪಿಯನ್ನು 117 ರೂ. ಏರಿಕೆ ಮಾಡಲಾಗಿದ್ದು, ಇದರೊಂದಿಗೆ ಒಟ್ಟು ಎಂಎಸ್ಪಿ 2,300 ರೂ. ಆಗಿದೆ ಎಂಬುದಾಗಿ ತಿಳಿಸಿದರು.
ಭತ್ತ, ಹತ್ತಿ, ಜೋಳ, ರಾಗಿ, ಬಾಜ್ರಾ, ಮೆಕ್ಕೆ ಜೋಳ, ಸೂರ್ಯಕಾಂತಿ, ಎಳ್ಳು ಸೇರಿ 14 ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಹತ್ತಿಗೆ ಒಂದು ಕ್ವಿಂಟಾಲ್ಗೆ 501 ರೂ. ಏರಿಕೆ ಮಾಡಲಾದರೆ, ಸೂರ್ಯಕಾಂತಿಗೆ 983 ರೂ., ಎಳ್ಳಿಗೆ 632 ರೂ., ತೊಗರಿಗೆ 550 ರೂ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಬೆಂಬಲ ಬೆಲೆ ಏರಿಕೆ ಮಾಡಿರುವುದರಿಂದ ದೇಶದ ರೈತರು ಸುಮಾರು 2 ಲಕ್ಷ ಕೋಟಿ ರೂಪಾಯಿಯನ್ನು ಕನಿಷ್ಠ ಬೆಂಬಲ ಬೆಲೆಯನ್ನಾಗಿ ಪಡೆಯಲಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 35 ಸಾವಿರ ಕೋಟಿ ರೂಪಾಯಿಯನ್ನು ಎಂಎಸ್ಪಿಯಾಗಿ ರೈತರಿಗೆ ನೀಡಲಾಗುತ್ತದೆ ಎಂಬುದಾಗಿ ಮಾಹಿತಿ ನೀಡಿದರು.
ಜೊತೆಗೆ ವಾರಾಣಸಿಯಲ್ಲಿರುವ ವಿಮಾಣ ನಿಲ್ದಾಣದಲ್ಲಿ 2,870 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಟರ್ಮಿನಲ್ ನಿರ್ಮಾಣಕ್ಕೂ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಮಹಾರಾಷ್ಟ್ರದಲ್ಲಿ ವಾಧವಾನ್ ಬಂದರು ನಿರ್ಮಾಣಕ್ಕೂ ಸಚಿವ ಸಂಪುಟ ಸಭೆಯು ಸಮ್ಮತಿ ಸೂಚಿಸಿದೆ.