ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರದ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್ಆರ್ಸಿಪಿ ಪಕ್ಷದ ಕಚೇರಿಯನ್ನು ನೀರಾವರಿ ಇಲಾಖೆಯ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದರಿಂದ ನೆಲಸಮ ಮಾಡಲಾಗಿದೆ ಎಂದು ತೆಲುಗು ದೇಶಂ ಪಕ್ಷ (ಟಿಡಿಪಿ) ಹೇಳಿದೆ.
ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಸೇಡು ರಾಜಕೀಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ ಮತ್ತು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ವೈಎಸ್ ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದು, ಇದಕ್ಕೆ ತಿರುಗೇಟು ನೀಡಿದ ಟಿಡಿಪಿ, ನೀರಾವರಿ ಇಲಾಖೆಯ ಎರಡು ಎಕರೆ ಜಾಗದಲ್ಲಿ ವಿರೋಧ ಪಕ್ಷದ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂದು ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್ಡಿಎ) ಮತ್ತು ಮಂಗಳಗಿರಿ ತಾಡೆಪಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಟಿಎಂಸಿ) ಪೌರಾಯುಕ್ತರಿಗೆ ದೂರು ನೀಡಲಾಗಿತ್ತು ಎಂದು ಟಿಡಿಪಿ ತಿಳಿಸಿದೆ. ಆ ದೂರನ್ನು ಅನುಸರಿಸಿ, ವೈಎಸ್ಆರ್ಸಿಪಿ ನಾಯಕರ ಈ ಅಕ್ರಮ ಕಟ್ಟಡದ ತೆರವುಗೊಳಿಸುವಿಕೆಯನ್ನು ಎಂಟಿಎಂಸಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪ್ರಾರಂಭಿಸಲಾಗಿದೆ ಎಂದು ವಿವರಿಸಿದೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ವೈಎಸ್ಆರ್ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಪಕ್ಷದ ಕಚೇರಿ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಸಿಎಂ ಆಗಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ. ಈ ಎರಡು ಎಕರೆಯಲ್ಲಿ ಕಚೇರಿ ನಿರ್ಮಿಸುವ ಮೂಲಕ ನೆರೆಯ 15 ಎಕರೆಯನ್ನು ಆಕ್ರಮಿಸಲು ಯೋಜಿಸಿದ್ದರು. ಈ ಎರಡು ಎಕರೆಯನ್ನು ವೈಎಸ್ಆರ್ಸಿಪಿಗೆ ಹಸ್ತಾಂತರಿಸಲು ನೀರಾವರಿ ಇಲಾಖೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದೆ.