ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ವ್ಯವಸ್ಥೆವೇ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಸಿಎಂ ಪತ್ನಿ ಸುನಿತಾ ಕೇಜ್ರಿವಾಲ್ ಆರೋಪಿಸಿದ್ದಾರೆ.
ಇದು ‘ಸರ್ವಾಧಿಕಾರ’ ಮತ್ತು ‘ತುರ್ತು ಪರಿಸ್ಥಿತಿ’ಗೆ ಸಮಾನ ಎಂದು ಬುಧವಾರ ಹೇಳಿದ್ದಾರೆ.
ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು ಸಿಗುವ ಸಾಧ್ಯತೆ ಇರುವುದರಿಂದ ಗಾಬರಿಗೊಂಡ ಬಿಜೆಪಿ ಈಗ ಸಿಬಿಐನಿಂದ ನಕಲಿ ಪ್ರಕರಣದಲ್ಲಿ ಅವರನ್ನು ಬಂಧಿಸಿದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಹೇಳಿದೆ.
ಅಬಕಾರಿ ನೀತಿ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೂನ್ 20 ರಂದು ತಮ್ಮ ಪತಿಗೆ ಜಾಮೀನು ಸಿಕ್ಕಿತ್ತು. ಆದರೆ ಜಾರಿ ನಿರ್ದೇಶನಾಲಯ(ಇಡಿ) ತಕ್ಷಣವೇ ಅದಕ್ಕೆ ತಡೆಯಾಜ್ಞೆ ತಂದಿದೆ. ಮರುದಿನವೇ ಸಿಬಿಐ ಅವರನ್ನು ಆರೋಪಿಯನ್ನಾಗಿ ಮಾಡಿದೆ ಮತ್ತು ಇಂದು ಅವರನ್ನು ಬಂಧಿಸಿದೆ. ಇಡೀ ವ್ಯವಸ್ಥೆಯು ದೆಹಲಿ ಸಿಎಂ ಜೈಲಿನಿಂದ ಹೊರಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಕಾನೂನಲ್ಲ. ಇದು ಸರ್ವಾಧಿಕಾರ, ಇದು ತುರ್ತುಸ್ಥಿತಿ ಎಂದು ಸುನಿತಾ ಕೇಜ್ರಿವಾಲ್ ಪೋಸ್ಟ್ ಮಾಡಿದ್ದಾರೆ.
ಎಎಪಿ ಸಹ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿದೆ.’ಸರ್ವಾಧಿಕಾರಿ ಕ್ರೌರ್ಯದ ಎಲ್ಲಾ ಮಿತಿಗಳನ್ನು ದಾಟಿದೆ. ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಸಿಗುವ ಎಲ್ಲಾ ಸಾಧ್ಯತೆಗಳು ಇದ್ದಾಗ, ಬಿಜೆಪಿ ಪ್ಯಾನಿಕ್ ಮೋಡ್ಗೆ ಹೋಗಿ ಕೇಜ್ರಿವಾಲ್ ಅವರನ್ನು ನಕಲಿ ಪ್ರಕರಣದಲ್ಲಿ ಸಿಬಿಐ ಮೂಲಕ ಬಂಧಿಸಿದೆ’ ಎಂದು ಆರೋಪಿಸಿದೆ.