ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾವಿ ರಿಂಗ್ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರೋರ್ವರು ಮೈಮೇಲೆ ಹಠಾತ್ ಮಣ್ಣು ಕುಸಿದು ಅಪಾಯಕ್ಕೆ ಸಿಲುಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಎಂಬಲ್ಲಿ ನಡೆದಿದೆ.
ಮಣ್ಣಿನಲ್ಲಿ ಹೂತುಹೋಗಿದ್ದ ಕಾರ್ಮಿಕ ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ.
ಪಂಜದ ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಯ ರಿಂಗ್ನ ಹೊರಗಿನ ಬದಿಗೆ ಮಣ್ಣು ತುಂಬುವ ಕೆಲಸ ನಡೆಯುತ್ತಿತ್ತು. ಕೇರಳದ ಕಾರ್ಮಿಕರು ಈ ಕಾಮಗಾರಿಯಲ್ಲಿ ತೊಡಗಿದ್ದರು. ಈ ವೇಳೆ ರಿಂಗ್ನ ಬದಿಯ ಮಣ್ಣು ಏಕಾಏಕಿ ಕೆಳಕ್ಕೆ ಕುಸಿದಿದ್ದು, ಓರ್ವ ಕಾರ್ಮಿಕ ಮುಕ್ಕಾಲು ಭಾಗ ಮಣ್ಣಿನಲ್ಲಿ ಹೂತು ಹೋಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಹಾಗೂ ಸ್ಥಳೀಯರು ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವುಗೊಳಿಸಿ ಕಾರ್ಮಿಕನನ್ನು ರಕ್ಷಿಸಿದ್ದಾರೆ.
ಸದ್ಯ ಕಾರ್ಮಿಕನನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.