March 4, 2026
Wednesday, March 4, 2026
spot_img

‘ಅಜ್ಮೀರ್ ದರ್ಗಾ ಶಿವದೇವಾಲಯ’: ಕೋರ್ಟ್ ಮೆಟ್ಟಿಲೇರಿದ ಹೊಸ ವಿವಾದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಐತಿಹಾಸಿಕ ಅಜ್ಮೀರ್ ಶರೀಫ್ ದರ್ಗಾ ಕುರಿತಂತೆ ಮತ್ತೊಮ್ಮೆ ವಿವಾದ ಮುನ್ನೆಲೆಗೆ ಬಂದಿದೆ. ದರ್ಗಾ ಪ್ರದೇಶವು ಮೂಲತಃ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿತ್ತು ಎಂಬ ಹೇಳಿಕೆಯೊಂದಿಗೆ, ಅಜ್ಮೀರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಅರ್ಜಿಯನ್ನು ಬಲಪಂಥೀಯ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಸಲ್ಲಿಸಿದ್ದು, ದರ್ಗಾ ಆವರಣದಲ್ಲಿ ಪುರಾತತ್ವ ಸಮೀಕ್ಷೆ ನಡೆಸುವಂತೆ ನ್ಯಾಯಾಲಯವನ್ನು ಅವರು ಮನವಿ ಮಾಡಿದ್ದಾರೆ. “ಅಜ್ಮೀರ್ ದರ್ಗಾ ಶಿವಾಲಯವಾಗಿತ್ತು. ನಂತರದ ಕಾಲದಲ್ಲಿ ಅದನ್ನು ದರ್ಗಾವಾಗಿ ಪರಿವರ್ತಿಸಲಾಗಿದೆ. ಈ ವಿಚಾರವನ್ನು ನಾನು ಬಹುಕಾಲದಿಂದ ಮುಂದಿಟ್ಟುಕೊಂಡು ಬಂದಿದ್ದೇನೆ” ಎಂದು ಅವರು ಹೇಳಿದ್ದಾರೆ. ಈ ಸಂಬಂಧ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಮನವಿಯನ್ನು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ರವಾನಿಸಲಾಗಿತ್ತು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಅರ್ಜಿದಾರರ ಪರ ವಕೀಲ ಎ.ಪಿ. ಸಿಂಗ್ ಮಾತನಾಡಿ, ದರ್ಗಾ ಸ್ಥಳವು ಪ್ರಾಚೀನ ಕಾಲದಿಂದಲೂ ಶಿವನಿಗೆ ಸಮರ್ಪಿತ ದೇವಾಲಯವಾಗಿತ್ತು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಅಧಿಕೃತ ಸಮೀಕ್ಷೆ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ರೀತಿಯ ಬೇಡಿಕೆಗಳು ಇದಕ್ಕೂ ಮುನ್ನವೂ ಕೇಳಿಬಂದಿದ್ದು, 2024ರಲ್ಲಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಕೂಡ ಇದೇ ವಿಷಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬೆಳವಣಿಗೆ ಅಜ್ಮೀರ್ ದರ್ಗಾ ಕುರಿತು ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಮತ್ತೆ ಚರ್ಚೆ ಆರಂಭವಾಗುವಂತೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !